ಮೂಲ ಸೌಕರ್ಯ ಕಲ್ಪಿಸಿ, ವಲಸೆ ತಪ್ಪಿಸಿ : ಇನ್ಫೋಸಿಸ್
ಬೆಂಗಳೂರು : ಮೂಲಭೂತ ಸೌಕರ್ಯ ವಿಚಾರದಲ್ಲಿ ಇನ್ಫೋಸಿಸ್ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದು, ಪರಿಸ್ಥಿತಿ ಹೀಗೇ ಮುದುವರಿದರೆ ಐಟಿ ಕಂಪನಿಗಳು ನೆರೆ ರಾಜ್ಯಗಳಿಗೆ ವಲಸೆ ಹೋಗಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮೋಹನ್ದಾಸ್ ಪೈ ಶನಿವಾರ(ಜನವರಿ 13) ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇನ್ಫೋಸಿಸ್ಗೆ ಪ್ರತ್ಯೇಕ ಕ್ಯಾಂಪಸ್ ಒದಗಿಸಬೇಕೆಂಬ ಬೇಡಿಕೆ ಸರ್ಕಾರದ ಮುಂದೆ ಐದು ವರ್ಷದಿಂದ ಕೊಳೆಯುತ್ತಿದೆ. ಕ್ಯಾಂಪಸ್ ಸಿಕ್ಕಿದ್ದರೆ 30ಸಾವಿರ ಮಂದಿಗೆ ಉದ್ಯೋಗ ದೊರೆಯುತ್ತಿತ್ತು. ಕ್ಯಾಂಪಸ್ ಸಿಗದ ಕಾರಣ ಕೇವಲ 10 ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಉಳಿದವರು ಹೊರ ರಾಜ್ಯಕ್ಕೆ ಹೋಗಿದ್ದಾರೆ. ಸರ್ಕಾರದ ಉದಾಸೀನದಿಂದಾಗಿ 20ಸಾವಿರ ಮಂದಿ ಉದ್ಯೋಗ ವಂಚಿತರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಇದೀಗ ಬೆಂಗಳೂರಿಗೆ ಬರುವ ಐಟಿ ಕಂಪನಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವುಗಳು ಹೈದರಾಬಾದ್ ಮತ್ತು ಚೆನ್ನೈನತ್ತ ಪಯಣ ಬೆಳೆಸಿವೆ. ಆದರೂ ಐಟಿ ರಫ್ತಿನಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಶೇಕಡಾ 35ರಷ್ಟು ರಫ್ತು ಇಲ್ಲಿಂದಲೇ ಆಗುತ್ತಿದೆ ಎಂದು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)