ಎನ್ಕೌಂಟರ್ : ಪರಾರಿಯಾಗಿದ್ದ ಮುಲ್ಕಿ ರಫೀಕ್ ಅಂತ್ಯ
ಮಣಿಪಾಲ: ಪೊಲೀಸರಿಂದ ತಪ್ಪಿಸಿಕೊಂಡಿದ್ದ ಮುಲ್ಕಿ ರಫೀಕ್ ಭಾನುವಾರ ನಸುಕಿನಲ್ಲಿ, ಉಡುಪಿ ರೈಲ್ವೇ ನಿಲ್ದಾಣದ ಬಳಿ ಪೊಲೀಸ್ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.
ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(ಪಶ್ಚಿಮ) ಎನ್.ಎನ್.ಸತ್ಯನಾರಾಯಣರಾವ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸುಳಿವು ಆಧರಿಸಿ, ರಫೀಕ್ ಬಂಧನಕ್ಕಾಗಿ ಉಡುಪಿ ರೈಲ್ವೇ ನಿಲ್ದಾಣದ ಪೊಲೀಸ್ ಅಧಿಕಾರಿಗಳು ವ್ಯಾಪಕ ಬಲೆ ಬೀಸಿದ್ದರು. ಈ ಹಂತದಲ್ಲಿ ತನ್ನ ಸಹಚರನೊಬ್ಬನೊಂದಿಗೆ ರೈಲು ಹಿಡಿಯಲು ರಫೀಕ್ ಆಗಮಿಸಿದ. ಆಗ ಪೊಲೀಸರನ್ನು ನೋಡುತ್ತಿದ್ದಂತೆಯೇ ರಫೀಕ್ ಅವರತ್ತ ಎರಡು ಸುತ್ತು ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಹತ್ತು ಸುತ್ತು ಗುಂಡಿನ ಮಳೆಗರೆದಾಗ ರಫೀಕ್ ಸ್ಥಳದಲ್ಲೇ ಹತನಾದ.
ಆನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.
ರಫೀಕ್, ಪೊಳಲಿ ಅನಂತು ಹಾಗೂ ಬಿಜೆಪಿ ನಾಯಕ ಸುಖಾನಂದ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ. ಪೊಲೀಸ್ ಬಂಧನದಲ್ಲಿದ್ದ ಈತ, ಶನಿವಾರ(ಜನವರಿ 13)ವಷ್ಟೇ ಪೊಲೀಸರ ವಶದಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಜೀವಂತವಾಗಿ ಹಿಡಿಯಲು ಅಥವಾ ಗೋಲಿಬಾರ್ ಮಾಡಲು ಪೊಲೀಸ್ ಇಲಾಖೆ ಸೂಚಿಸಿತ್ತು.
(ಯುಎನ್ಐ)