ಟಯೋಟಾ ಕಾರ್ಖಾನೆಗೆ ಅನಿರ್ದಿಷ್ಟ ಕಾಲ ಬೀಗಮುದ್ರೆ!
ಬೆಂಗಳೂರು : ಧರಣಿ ನಿರತ ಕಾರ್ಮಿಕ ಸಂಘದ ವರ್ತನೆ ಬಗ್ಗೆ ಬೇಸರಗೊಂಡಿರುವ ಟಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆಯ ಆಡಳಿತ ಮಂಡಳಿ, ಅನಿರ್ದಿಷ್ಟ ಕಾಲ ಕಂಪನಿಯನ್ನು ಮುಚ್ಚಲು ನಿರ್ಧರಿಸಿದೆ.
ಸಮಸ್ಯೆ ಇತ್ಯರ್ಥಕ್ಕೆ ಕಾರ್ಮಿಕ ಅಯುಕ್ತರು, ಮಾತುಕತೆಗಾಗಿ ಕಾರ್ಮಿಕ ಸಂಘವನ್ನು ಆಹ್ವಾನಿಸಿದ್ದರು. ಆಹ್ವಾನ ನಿರಾಕರಿಸಿದ ಕಾರ್ಮಿಕರ ಬಗ್ಗೆ ಆಡಳಿತ ಮಂಡಳಿ ಅಸಮಾಧಾನಗೊಂಡಿದೆ.
ಹಿನ್ನೆಲೆ : ನೋಟೀಸ್ ಜಾರಿ ಮಾಡದೆ ಮೂವರನ್ನು ಕೆಲಸದಿಂದ ತೆಗೆದಿದ್ದನ್ನು ಪ್ರಶ್ನಿಸಿ, ಬಿಡದಿ ಬಳಿಯಿರುವ ಟಯೋಟಾ ಕಂಪನಿಯ ಕಾರ್ಮಿಕರು ಕಳೆದ ವಾರದಿಂದ ಧರಣಿಯಲ್ಲಿ ತೊಡಗಿದ್ದಾರೆ. ಕೆಲಸದ ಬಗ್ಗೆ ಸುರಕ್ಷತೆಯೇ ಇಲ್ಲದಂತಾಗಿದೆ ಎಂದು ಕಾರ್ಮಿಕ ಮುಖಂಡರು ಹೇಳಿದ್ದಾರೆ.
ಕಂಪನಿ ಪ್ರತಿಕ್ರಿಯೆ : ಮುಷ್ಕರ ನಿರತ ಕಾರ್ಮಿಕರು ಕಂಪನಿಯ ಸೆಕ್ಯೂರಿಟಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿ, ಕಾರ್ಖಾನೆಯ ವಾತಾವರಣವನ್ನು ಹದಗೆಡಿಸಿದ್ದಾರೆ. ಕೆಲವು ಅಧಿಕಾರಿಗಳಿಗೂ ಗಾಯಗಳಾಗಿವೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಕಾರ್ಮಿಕ ಅಯುಕ್ತರ ಸಮ್ಮುಖದಲ್ಲೇ ಮಾತುಕತೆ ನಡೆಸುವುದಾಗಿ ಟಯೋಟಾ ಕಂಪೆನಿ ಹೇಳಿದೆ.
ಅಯುಕ್ತರ ಕಚೇರಿಯಿಂದ ಭರವಸೆ : ಜನವರಿ12ಕ್ಕೆ ಸಭೆಯನ್ನು ಕರೆದು ಪರಿಸ್ಥಿತಿಯನ್ನು ಸರಿಪಡಿಸುವುದಾಗಿ ಕಾರ್ಮಿಕ ಉಪ ಅಯುಕ್ತ ವಿ.ಎನ್. ಹಿಟ್ಟಂಗಡಿಯವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)