ಕುಮಾರಣ್ಣನ ಮೇಲೆ ಕೋಪ : ಜಮೀರ್ ರಾಜೀನಾಮೆ
ಬೆಂಗಳೂರು : ಕುಮಾರಣ್ಣ ರಾಮನಾದರೆ, ನಾನು ಹನುಮಂತ ಎನ್ನುತ್ತಿದ್ದ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಳಗ್ಗೆ ರಾಜಭವನಕ್ಕೆ ತೆರಳಿದ ಅವರು, ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಒಪ್ಪಿಸಿದರು.
ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಕ್ರೀದ್ ಹಬ್ಬದಲ್ಲಿ ಭಾಗವಹಿಸದೆ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನಾನು ರಾಜೀನಾಮೆ ವಾಪಸು ಪಡೆಯಬೇಕೆಂದರೆ ಕುಮಾರಸ್ವಾಮಿ ನನ್ನ ಸಮುದಾಯದ ಕ್ಷಮೆಯಾಚಿಸಬೇಕು. ಸದ್ಯದಲ್ಲೇ ಸಭಾಧ್ಯಕ್ಷ ಕೃಷ್ಣ ಅವರಿಗೂ ರಾಜೀನಾಮೆ ಪತ್ರ ಒಪ್ಪಿಸುವುದಾಗಿ ಅವರು ತಿಳಿಸಿದರು.
ಮುಖ್ಯಮಂತ್ರಿ ಪ್ರತಿಕ್ರಿಯೆ : ಮುಸ್ಲಿಂ ಸಮುದಾಯಕ್ಕೆ ಹಿಂದೆಂದಿಗಿಂತಲೂ ಈ ಸರ್ಕಾರ ಹೆಚ್ಚಿನ ನೆರವು ನೀಡಿದೆ. ಹಜ್ ಭವನಕ್ಕೆ 5ಎಕರೆ ಜಮೀನು ಮಂಜೂರು ಮಾಡಿದೆ. ಜಮೀರ್ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜಮೀರ್ ಎದುರೇಟು : ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮೀರ್, ಹಜ್ ಭವನಕ್ಕೆ ಮಂಜೂರಾದ ಜಮೀನು ಕುಮಾರಸ್ವಾಮಿ ಅವರ ಖಾಸಗಿ ಸ್ವತ್ತೇನೂ ಅಲ್ಲ. ಅದು ಸರ್ಕಾರದ್ದು. ಅವರು ಮುಸ್ಲಿಂ ಸಮುದಾಯಕ್ಕೆ ವಿಶೇಷವಾದುದೇನನ್ನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ.
ಹನುಮಂತ ಯಾಕೆ ಹೀಗೆ ಮಾಡಿದ? : ಕುಮಾರಸ್ವಾಮಿ ಹೆಸರಲ್ಲಿ ಸಚಿವ ಹುದ್ದೆಯ ಪ್ರಮಾಣ ವಚನ ಸ್ವೀಕರಿಸಿದವರು ಜಮೀರ್ ಅಹಮದ್. ಆದರೀಗ, ಕುಮಾರಸ್ವಾಮಿ ಕಂಡರೆ, ಜಮೀರ್ಗೆ ಕೆಂಡದಂತಹ ಕೋಪ. ಜಮೀರ್ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಡಕಾಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)