ಕನ್ನಡ ಕನ್ನಡ... ಬನ್ನಿ ನಮ್ಮ ಸಂಗಡ : ರಕ್ಷಣಾ ವೇದಿಕೆ ಕರೆ
ಬೆಂಗಳೂರು : ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ , ಶನಿವಾರ ಕಾಲ್ನಡಿಕೆ ಜಾಥಾವನ್ನು ನಗರದಲ್ಲಿ ಆಯೋಜಿಸಿತ್ತು.
ನ್ಯಾಷನಲ್ ಕಾಲೇಜಿನಿಂದ ರಾಜಭವನದ ವರೆಗೆ ಕಾಲ್ನಡಿಗೆ ಮೂಲಕ ತೆರಳಿದ ಜಾಥಾ, ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು. ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿದರು.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ರಾಜ್ಯ ಸರ್ಕಾರ ನಿರ್ಲಕ್ಷ್ಯದ ಪರಿಣಾಮ ಕನ್ನಡ ಇಕ್ಕಟ್ಟಿಗೆ ಸಿಲುಕಿದೆ. ಕನ್ನಡಕ್ಕಾಗಿ ನಾವಲ್ಲದೇ ಇನ್ಯಾರು ಕೈ ಎತ್ತಬೇಕು. ಕನ್ನಡಿಗರು ಬೀದಿಗೆ ಬರಬೇಕು. ಇಲ್ಲದಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಕಣ್ಮರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಮಾನ ನೀಡಿ, ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಬೇಕು. ಕಾಸರಗೋಡು ವಿವಾದವನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಉಗ್ರಸ್ವರೂಪ ಪಡೆಯುತ್ತದೆ ಎಂದು ನಾರಾಯಣ ಗೌಡ ಎಚ್ಚರಿಸಿದರು. ವೇದಿಕೆಯ ಎಸ್.ರಮೇಶ್, ಎನ್.ಶ್ರೀನಿವಾಸ ರೆಡ್ಡಿ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.
ಈ ಜಾಥಾದ ಪರಿಣಾಮ ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
(ದಟ್ಸ್ ಕನ್ನಡ ವಾರ್ತೆ)