ಕೆರಳಿತು ಬೀದರ್! ಅಂಬೇಡ್ಕರ್ಗಾಗಿ ಸಿಡಿದೆದ್ದರು ದಲಿತರು!
ಬೀದರ್ : ಅಂಬೇಡ್ಕರ್ ಕಟ್ಟೆಗೆ ಅವಮಾನವೆಸಗಿದ್ದಾರೆಂಬ ಸಂಗತಿ ಹುಮನಾಬಾದ್ ತಾಲೂಕಿನ ಮನ್ನೇಕೇರಿ ಗ್ರಾಮದಲ್ಲಿ ಬುಧವಾರ ಹಿಂಸಾಚಾರಕ್ಕೆ ಕಾರಣವಾಯಿತು. ಈ ಪರಿಣಾಮ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.
ಗ್ರಾಮದಲ್ಲಿ ಕಲ್ಲು ತೂರಾಟ, ಬಸ್ಗಳಿಗೆ ಬೆಂಕಿಹಚ್ಚುವ ಘಟನೆಗಳು ನಡೆದಿದ್ದು, ಪರಿಸ್ಥಿತಿ ಹತೋಟಿಗೆ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಗುಂಪು ಕರಗುವುದಿಲ್ಲ ಎಂದು ಸ್ಪಷ್ಟವಾದಾಗ, ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.
ಕಿಡಿಗೇಡಿಗಳು ಅಂಬೇಡ್ಕರ್ ಕಟ್ಟೆಗೆ ಚಪ್ಪಲಿ ಹಾರ ಹಾಕಿದ್ದಾರೆಂಬ ವಿಚಾರ, ಕ್ಷಣದಲ್ಲಿಯೇ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿತು. ಸುಮಾರು 3000ಕ್ಕೂ ಅಧಿಕ ಪ್ರತಿಭಟನಾಕಾರರು ಗ್ರಾಮಕ್ಕೆ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ರಸ್ತೆ ತಡೆಗೆ ಕುಳಿತರು. ಈ ಸಂದರ್ಭದಲ್ಲಿ ಎಂಟಕ್ಕೂ ಅಧಿಕ ವಾಹನಗಳು ಭಸ್ಮವಾದವು. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ತಲಾ ಒಂದೊಂದು ವಾಹನಗಳಿಗೆ ಬೆಂಕಿ ಹಚ್ಚಲಾಯಿತು.
ಗುಂಪು ಚದುರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಪತ್ರಕರ್ತರು ಸೇರಿದಂತೆ ನೂರಾರು ಜನರಿಗೆ ಗಾಯಗಳಾಗಿವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿದ್ದು, ಬೀದರ್ ಮತ್ತು ಭಾಲ್ಕಿ ಪಟ್ಟಣದಲ್ಲಿ ಇಂದು ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು.
(ಯುಎನ್ಐ)