5ನೇ ಏಕದಿನ ಪಂದ್ಯ : ದಕ್ಷಿಣ ಆಫ್ರಿಕಾ ಮತ್ತೆ ವಿಜಯಶಾಲಿ
ಸೆಂಚೂರಿಯನ್ ಪಾರ್ಕ್(ದಕ್ಷಿಣ ಆಫ್ರಿಕಾ) : ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ 5ನೇ ಏಕದಿನ ಪಂದ್ಯದಲ್ಲೂ ಗೆಲ್ಲುವ ಮೂಲಕ ಸರಣಿಯಲ್ಲಿ ಸಂಪೂರ್ಣ ವಿಜೃಂಭಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್, ಫೀಲ್ಡಿಂಗ್ ಆಯ್ದುಕೊಂಡರು. ಇದನ್ನು ಸಮರ್ಥಿಸುವಂತೆ ದಕ್ಷಿಣ ಆಫ್ರಿಕಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು.
ಭಾರತ ಮೊದಲೆರಡು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡು ಆತಂಕದಲ್ಲಿತ್ತು. ಈ ಕ್ಷಣದಲ್ಲಿ ದಿನೇಶ್ ಮೋಂಗಿಯಾ ಹಾಗೂ ಸಚಿನ್ ತೆಂಡೂಲ್ಕರ್ ತಂಡದ ನೆರವಿಗೆ ಬಂದರು. ಮತ್ತೆ ವಿಕೆಟ್ಗಳು ತಪತಪನೆ ಬೀಳತೊಡಗಿದವು. ಆದರೆ, ಮಹೇಂದ್ರಸಿಂಗ್ ಧೋನಿ ಹಾಗೂ ಜಹೀರ್ಖಾನ್ ಬಿರುಸಿನ ಬ್ಯಾಟಿಂಗ್ ಮಾಡಿದ ಕಾರಣ, ಭಾರತ 200ರನ್ ಗಳಿಸಲು ಸಾಧ್ಯವಾಯಿತು.
ಈ ಪಂದ್ಯದಲ್ಲಿ ಇರ್ಫಾನ್ ಪಠಾಣ್ 1000ರನ್ ಪೂರ್ಣಗೊಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ 100ವಿಕೆಟ್ ಹಾಗೂ 1000ರನ್ ಗಳಿಸಿದ ಭಾರತದ 6ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.
ಭಾರತ ಅಂತಿಮವಾಗಿ 50ಓವರುಗಳಲ್ಲಿ 9ವಿಕೆಟ್ ಕಳೆದುಕೊಂಡು 200ರನ್ ಗಳಿಸಿತು. ಸಚಿನ್ 55, ಮೋಂಗಿಯಾ 41, ಧೋನಿ 44 ರನ್ ಗಳಿಸಿದರು. ಟಿನಿ 3 ಹಾಗೂ ಪೊಲಾಕ್ 2 ವಿಕೆಟ್ ಗಳಿಸಿ ಯಶಸ್ವೀ ಬೌಲರ್ ಎನಿಸಿದರು.
ಗೆಲುವಿನ ಗುರಿಯನ್ನು ಅತ್ಯಂತ ಸಮರ್ಥವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಕೇವಲ 31.2ಓವರುಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 201ರನ್ ಪೇರಿಸಿತು. ಗ್ರೇಮ್ ಸ್ಮಿತ್ 79ರನ್ ಗಳಿಸಿದರೆ, ಎಬಿ ಡಿ ವಿಲಿಯರ್ಸ್ ಅಜೇಯ 92ರನ್ ಬಾರಿಸಿದರು. ಹರ್ಭಜನ್ಸಿಂಗ್ ಗ್ಮೇಮ್ ಸ್ಮಿತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಉಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.
(ಏಜನ್ಸೀಸ್)