ಈ ಚೆನ್ನಿಗಪ್ಪ ಪತ್ರಕರ್ತನ ಮೇಲೆ ಕೈ ಮಾಡಿದ್ದೇಕೆ ಗೊತ್ತೆ?
ಮೈಸೂರು : ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಹಾಗೂ ಅವರ ಕಾರು ಚಾಲಕ, ಪತ್ರಕರ್ತನೋರ್ವನ ಮೇಲೆ ಹಲ್ಲೆ ನಡೆಸುವುದರೊಂದಿಗೆ ಚಾಮುಂಡೇಶ್ವರಿ ಚುನಾವಣೆ ಮತ್ತೊಂದು ಅಸಭ್ಯ ಘಟನೆಗೆ ಸಾಕ್ಷಿಯಾಗಿದೆ. ಚೆನ್ನಿಗಪ್ಪ ರಾಜೀನಾಮೆಗೆ ಪ್ರತಿಪಕ್ಷಗಳು ಗುರುವಾರ ಪಟ್ಟು ಹಿಡಿದಿವೆ.
ಚಾಮುಂಡಿಬೆಟ್ಟದ ಸಮೀಪ ಬುಧವಾರ(ನವೆಂಬರ್ 29) ಸಚಿವ ಚೆನ್ನಿಗಪ್ಪ ಅವರ ಕಾರು ಹೋಗುತ್ತಿದ್ದಾಗ ಚುನಾವಣಾ ವೀಕ್ಷಕರು ತಡೆದು ನಿಲ್ಲಿಸಿ, ಅವರ ಹಿಂದೆ ಬರುತ್ತಿದ್ದ ಸುಮಾರು 12ಕಾರುಗಳಿಗೆ ಪ್ರಚಾರದ ಅನುಮತಿ ಪತ್ರ ಇಲ್ಲ ಎಂಬ ಕಾರಣ ನೀಡಿ, ತಮ್ಮ ವಶಕ್ಕೆ ತೆಗೆದುಕೊಂಡರು.
ನಿಯಮ ಉಲ್ಲಂಘಿಸಿ ಕಾರುಗಳನ್ನು ಬಳಸಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಚೆನ್ನಿಗಪ್ಪ ಕೈಮುಗಿದು ಕ್ಷಮೆ ಕೋರಿದರು. ಈ ಸಂದರ್ಭದಲ್ಲಿ ಹಾಜರಿದ್ದ ‘ಮೈಸೂರು ಮಿತ್ರ’ ಪತ್ರಿಕಾ ವರದಿಗಾರ ಕೆ.ಕಿರಣ್ಕುಮಾರ್, ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದೇ ಹಲ್ಲೆಗೆ ಕಾರಣ.
ವೀಕ್ಷಕರು ಸ್ವಲ್ಪ ದೂರ ಹೋದ ನಂತರ ಚೆನ್ನಿಗಪ್ಪ ಹಾಗೂ ಅವರ ಕಾರು ಚಾಲಕ, ಕಿರಣ್ಕುಮಾರ್ ಮೇಲೆ ಹಲ್ಲೆ ನಡೆಸಿ ಕ್ಯಾಮರಾ ಕಿತ್ತುಕೊಂಡಿದ್ದಾರೆ. ಮಾಧ್ಯಮ ಮಿತ್ರರು ಘಟನೆಯನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ದತ್ತ ರ ಶಿಷ್ಯನಿಗೆ ಗೂಸಾ ಬಿದ್ದವು! : ಇದಾದನಂತರ ಜಿಲ್ಲಾ ಪತ್ರಕರ್ತರ ಭವನದಲ್ಲಿ, ಜೆಡಿಎಸ್ ವಕ್ತಾರ ವೈಎಸ್ವಿ ದತ್ತ, ಘಟನೆ ಸಮರ್ಥಿಸಿ ಚುನಾವಣೆಯಲ್ಲಿ ಇದೆಲ್ಲ ಮಾಮೂಲು ಎನ್ನುವಂತೆ ಮಾತಾಡಿದರು. ಇದರಿಂದ ರೊಚ್ಚಿಗೆದ್ದ ಸುದ್ದಿಗಾರರು ದತ್ತ ಅವರೊಂದಿಗೆ ವಾಗ್ವಾದಕ್ಕಿಳಿದರು. ಈ ಸಂದರ್ಭದಲ್ಲಿ ಅವಾಚ್ಯ ಪದಗಳನ್ನು ಬಳಸಿದ ಅವರ ಬೆಂಬಲಿಗನೊಬ್ಬ ಏಟು ತಿನ್ನಬೇಕಾಯಿತು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಇನ್ನು ಮುಂದೆ ಜೆಡಿಎಸ್ ಪತ್ರಿಕಾಗೋಷ್ಠಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಕಂಗಾಲಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)