ಹಣ್ಣುಗಳಿಂದ ತುಂಬಿದ ಗಿಡದ ಮೇಲೆಯೇ ಎಲ್ಲರ ಕಣ್ಣು
ಸತತ ಸೋಲು, ರಾಷ್ಟ್ರದಲ್ಲಿ ಸಂಸದರ ಮತ್ತು ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡಕ್ಕೆ ಪವಾರ್ ಆಸರೆ.
ನವದೆಹಲಿ : ಹಣ್ಣುಗಳಿಂದ ತುಂಬಿದ ಗಿಡದ ಮೇಲೆಯೇ ಎಲ್ಲರ ಕಣ್ಣು. ಅದಕ್ಕೇ ಎಲ್ಲರೂ ಕಲ್ಲು ಹೊಡೆಯುತ್ತಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟ್ಟಿಗರ ಚೆಂಡಿನ ದಾಳಿಯಿಂದ ಕಂಗೆಟ್ಟಿರುವ ಭಾರತ ಕ್ರಿಕೆಟ್ ತಂಡ ಮತ್ತು ಕೋಚ್ ಗ್ರೆಗ್ ಚಾಪೆಲ್ ಮೇಲೆ ಸಂಸದರ ದಾಳಿಗೆ ಪ್ರತಿಯಾಗಿ ಬಿಸಿಸಿಐ ಚೀಫ್ ಶರದ್ ಪವಾರ್ ಕ್ರಿಕೆಟ್ ತಂಡ ಮತ್ತು ಚಾಪೆಲ್ರನ್ನು ಮೇಲಿನಂತೆ ಸಮರ್ಥಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾರಾಗಬೇಕೆಂದು ನಾಯಕ ರಾಹುಲ್ ದ್ರಾವಿಡ್ ಹೇಳುತ್ತಾರೆಯೆ? ಯುಪಿಎ ಅಧ್ಯಕ್ಷ ಯಾರಾಗಬೇಕೆಂದು ಚಾಪೆಲ್ ಸಲಹೆ ನೀಡಿದ್ದಾರೆಯೆ? ಸಂಸದರು ಕ್ರಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪವಾರ್ ನುಡಿದಿದ್ದಾರೆ.
ಗ್ರೆಗ್ ಚಾಪೆಲ್ ಕೂಡ, ನಾನು ಹೇಳಿದ್ದು - ಅವರಿಗೆ (ಸಂಸದರಿಗೆ) ಅವರ ಕರ್ತವ್ಯವಿರುತ್ತದೆ, ನಮಗೆ ನಮ್ಮ ಕರ್ತವ್ಯವಿರುತ್ತದೆ ಎಂದು ಹೇಳಿದ್ದನ್ನು ಬೇಕಾಬಿಟ್ಟಿ ತಿರುಚಲಾಗಿದೆ ಎಂದು ತಮ್ಮ ಮೊದಲಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಂಸದರು ತಿಳಿದಂತೆ, ‘ಸಂಸದರಿರುವುದೇ ಟೀಕೆ ಮಾಡಲು. ಅದಕ್ಕಾಗಿ ಅವರಿಗೆ ಹಣ ನೀಡಲಾಗುತ್ತಿದೆ’ ಎಂದು ಹೇಳಿಲ್ಲ ಎಂದು ಚಾಪೆಲ್ ಹೇಳಿದ್ದಾರೆ.
ಈ ಮಧ್ಯೆ, ಎಲ್ಲ ಸಂಸದರು ಒಪ್ಪುವುದಾದರೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸೋಣ ಎಂದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ರೇಣುಕಾ ಚೌಧರಿ ಹೇಳಿದ್ದಾರೆ. ಆದರೆ ಸಂಸದ ಹಾಗೂ ಮಾಜಿ ಕ್ರಿಕೆಟಿಗ ನವಜ್ಯೋತ್ಸಿಂಗ್ ಸಿದ್ಧು ಈ ಕುರಿತು ವಿಭಿನ್ನ ಹೇಳಿಕೆ ನೀಡಿದ್ದಾರೆ.
‘ಅಭಿಮಾನಿಗಳು ಹಾಗೂ ಸಂಸದರು ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಿಯಿಸುತ್ತಿದ್ದಾರೆ. ಇಡೀ ವ್ಯವಸ್ಥೆಯ ಜವಾಬ್ದಾರಿಯನ್ನು ಕೇವಲ ಒಬ್ಬ ವ್ಯಕ್ತಿ ಮೇಲೆ ಹೊರಿಸುವುದು ತಪ್ಪು. ನಾವು 4-5ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದು, ಯಾವಾಗ ಚೆನ್ನಾಗಿ ಆಡಿದ್ದೇವೆ ಹೇಳಿ’ ಎಂದು ಪ್ರಶ್ನಿಸಿದ್ದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಆಸ್ಟ್ರೇಲಿಯಾ ಹೊರತುಪಡಿಸಿ , ಜಗತ್ತಿನ ಎಲ್ಲ ತಂಡಗಳೂ ಕಳಪೆ ಪ್ರದರ್ಶನ ನೀಡಿವೆ ಎಂದಿದ್ದಾರೆ.
(ಏಜನ್ಸೀಸ್)