ಕೈಕೊಟ್ಟ ಬ್ಯಾಟಿಂಗ್ : ಭಾರತಕ್ಕೆ ಮತ್ತೆ ಹೀನಾಯ ಸೋಲು
ಕೇಪ್ಟೌನ್ : ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ನೂರರ ಗಡಿ ದಾಟದೇ ಸೋತಿದ್ದ ಭಾರತ, ಮೂರನೇ ಪಂದ್ಯದಲ್ಲೂ ಹೀನಾಯವಾಗಿ ಸೋತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 76 ರನ್ಗಳಾಗುವಷ್ಟರಲ್ಲಿ ಆರು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ ಜಸ್ಟಿನ್ ಕೆಂಪ್ ಆರು ಸಿಕ್ಸರ್ಗಳೊಂದಿಗೆ ಅಜೇಯ 100ರನ್ ಗಳಿಸಿ, ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಲು ಕಾರಣವಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರುಗಳಲ್ಲಿ 7ವಿಕೆಟ್ ನಷ್ಟಕ್ಕೆ 274ರನ್ ಗಳಿಸಿತು.
ಗೆಲುವಿನ ಗುರಿ ಬೆನ್ನು ಹತ್ತಿದ ಭಾರತ ಆರಂಭದಲ್ಲೇ ಎಡವಿತು. ವೀರೇಂದ್ರ ಸೆಹ್ವಾಗ್ ಖಾತೆ ತೆರೆಯದೇ ಪೆವಿಲಿಯನ್ಗೆ ಮರಳಿದರು. ವಿಕೆಟ್ಗಳ ಪತನ ಹಾಗೆಯೇ ಮುಂದುವರಿಯಿತು. ಮಹೇಂದ್ರಸಿಂಗ್ ಧೋನಿ(55ರನ್, 48ಎಸೆತ, 3ಬೌಂಡರಿ, 4ಸಿಕ್ಸರ್), ರಾಹುಲ್ ದ್ರಾವಿಡ್(63ರನ್, 103 ಎಸೆತ, 4ಬೌಂಡರಿ, 1ಸಿಕ್ಸರ್) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು. ಆದರೆ ತಂಡವಾಗಿ ಆಡುವಲ್ಲಿ ಭಾರತ ಮತ್ತೊಮ್ಮೆ ವಿಫಲವಾಯಿತು.
106ರನ್ಗಳಿಂದ ಸೋತ ಭಾರತ, 41.3ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 168ರನ್ಗಳನ್ನು ಮಾತ್ರ ಕೂಡಿಹಾಕಿತು. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ನಾಲ್ಕು ಹಾಗೂ ಐದನೇ ಪಂದ್ಯಗಳು ಬಾಕಿ ಇವೆ.
(ಏಜನ್ಸೀಸ್)