ಶಿರಾದ ರಮೇಶ್ ಬಗ್ಗೆ ನಾವು ಹೆಮ್ಮೆಪಡಲು ಕಾರಣಗಳಿವೆ!
ಶಿರಾ ರಮೇಶ್ಗೆ ರಾಷ್ಟ್ರಪ್ರಶಸ್ತಿ ಸಿಗಲಿ. ಇಂತಹ ಪ್ರಶಸ್ತಿಗಳಿಂದ ಅವರ ಬೆನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಲಿ. ರಮೇಶ್ರಂತಾಗಲು ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ.
- ಹ.ಚ.ನ
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ, ವಿವಿಧ ಕ್ಷೇತ್ರಗಳಲ್ಲಿ ಹಾಗೂ ಸಮುದಾಯದ ಪ್ರಗತಿಯಲ್ಲಿ ರಮೇಶ್ ಸಲ್ಲಿಸಿರುವ ಸೇವೆ ಗುರ್ತಿಸಿ, ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇತ್ತೀಚೆಗೆ ರಾಜ್ಯ ಯುವ ಪ್ರಶಸ್ತಿ ನೀಡಿದೆ.
ರಾಯಚೂರು ಜಿಲ್ಲೆಯ ದೇವಸಗೂರಿನಲ್ಲಿ ಇತ್ತೀಚೆಗೆ ಜರುಗಿದ ಯುವಜನ ಮೇಳದಲ್ಲಿ, ಸಚಿವ ಅಲ್ಗೋಡು ಹನುಮಂತಪ್ಪ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಸಗೂರು ಶಾಸಕ ಪಾಪಾರೆಡ್ಡಿ, ಯುವಜನ ಸೇವಾ ಇಲಾಖೆ ಕಾರ್ಯದರ್ಶಿ ಸಿ.ಎಚ್.ಗೋವಿಂದ ಭಟ್ , ಜಂಟಿ ನಿರ್ದೇಶಕ ಆರ್.ಎಲ್ಪಾಟೀಲ್ ಹಾಜರಿದ್ದರು.
ಯಾರಿವರು ರಮೇಶ್? ಏನಿವರ ವಿಶೇಷತೆ? :
ವೃತ್ತಿಯಲ್ಲಿ ರಮೇಶ್ ದಂತವೈದ್ಯರು. ಆದರೆ ತಮ್ಮ ಆಸಕ್ತಿ, ಕ್ರಿಯಾಶೀಲತೆ ಮತ್ತು ಅಭಿರುಚಿಗಳಿಂದ ಸಮಾಜಮುಖಿಯೆಂದು ಗುರ್ತಿಸಲ್ಪಟ್ಟಿದ್ದಾರೆ. ಶ್ರೀ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘಕ್ಕೆ ಚಾಲನೆ ನೀಡಿದ ರಮೇಶ್, ಊರಿನ ಹುಡುಗರ ಪಾಲಿಗೆ ಮಾರ್ಗದರ್ಶಿ, ಗೆಳೆಯ, ಹಿತೈಷಿ ಎಲ್ಲವೂ ಹೌದು.
ವಿದ್ಯಾರ್ಥಿಗಳು ಮತ್ತು ಯುವಕರ ಪ್ರತಿಭೆಗಳನ್ನು ಹೊರಚಿಮ್ಮಿಸುವಲ್ಲಿ, ಅವುಗಳಿಗೆ ವೇದಿಕೆ ಕಲ್ಪಿಸುವಲ್ಲಿ ರಮೇಶ್ಗೆ ಸದಾ ಚಿಮ್ಮುವ ಉತ್ಸಾಹ. ಈ ಭಾಗದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದು. ಈ ನಡುವೆ ಶಿರಾ ತಾಲೂಕಿನ ಇತಿಹಾಸವನ್ನು ದಾಖಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಊರೂರು ಸುತ್ತಿ, ರಾಶಿ ರಾಶಿ ಮಾಹಿತಿ, ಪೋಟೊಗಳು ಮತ್ತು ಸಿ.ಡಿ.ಗಳನ್ನು ಸಂಗ್ರಹಿಸಿದ್ದಾರೆ. ತಾಲೂಕಿನ ಇತಿಹಾಸವನ್ನು ಪುಸ್ತಕ ರೂಪದಲ್ಲಿ ಹೊರತರುವ ಅಪೇಕ್ಷೆ ಅವರದು.
ಇನ್ನು ರಮೇಶ್ ವೈದ್ಯ ವೃತ್ತಿಯ ಬಗ್ಗೆ ಹೇಳುವುದು ಸಾಕಷ್ಟಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಈ ಭಾಗದ ಜನರಿಗೆ ರಮೇಶ್ ದೆಸೆಯಿಂದ ಸಾಕಷ್ಟು ದುಡ್ಡು ಜೇಬಲ್ಲಿಯೇ ಉಳಿದಿದೆ... ಸಮಸ್ಯೆಯೂ ತೀರಿದೆ...’
ರಾಷ್ಟ್ರಪ್ರಶಸ್ತಿ ಸಿಗಲಿ :
ಎಲೆಮರೆಕಾಯಿಯಂತೆ ರಮೇಶ್ ತಮ್ಮಪಾಡಿಗೆ ತಾವು ಏನನ್ನಾದರೂ ಸದಾ ಮಾಡುತ್ತಲೇ ಇರುತ್ತಾರೆ. ಅವರ ಹೆಸರನ್ನು ರಾಷ್ಟ್ರಪ್ರಶಸ್ತಿಗೆ ಶಿಫಾರಸು ಮಾಡಿರುವ ಸಂಗತಿ ತಿಳಿದು ಬಂದಿದ್ದು, ಪ್ರಶಸ್ತಿ ಅವರಿಗೆ ಸಿಗಲಿ... ಇಂತಹ ಪ್ರಶಸ್ತಿಗಳಿಂದ ರಮೇಶ್ ಬೆನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಲಿ... ರಮೇಶ್ರಂತೆ ಆಗಲು ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ... ಎಂಬುದು ‘ದಟ್ಸ್ ಕನ್ನಡ’ದ ಹಾರೈಕೆ.