‘ಕೋಮು ಸೌಹಾರ್ದ ವೇದಿಕೆಯಡಿ ಉಗ್ರರ ಚಟುವಟಿಕೆ’
ಮಂಗಳೂರು : ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು, ಕೋಮು ಸೌಹಾರ್ದ ವೇದಿಕೆಯ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಅನುಮಾನಗಳಿವೆ. ಕೂಡಲೇ ರಾಜ್ಯ ಸರ್ಕಾರ ವೇದಿಕೆಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಭಜರಂಗ ದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡುತ್ತಿದ್ದ ಅವರು, ಉತ್ತರ ಭಾರತದಿಂದ ಇತ್ತ ಧಾವಿಸುವ ವಿಧ್ವಂಸಕ ಶಕ್ತಿಗಳಿಗೆ ಇಲ್ಲಿ ಆಶ್ರಯ ಸುಲಭವಾಗಿ ಸಿಗುತ್ತಿದೆ. ಹೀಗಾಗಿ ವೇದಿಕೆ ಮತ್ತು ಮದರಸಗಳ ಮೇಲೆ ಸರ್ಕಾರ ಕಣ್ಣಿಡಬೇಕು ಎಂದು ಹೇಳಿದರು.
ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸಿದರೆ ಮತ್ತು ಬಾಬಾಬುಡನ್ಗಿರಿಯಲ್ಲಿನ ಎರಡು ದಿನಗಳ ದತ್ತ ಜಯಂತಿಗೆ ಅಡಚಣೆ ಮಾಡಿದರೆ, ರಾಜ್ಯವ್ಯಾಪಿ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೃಹ ಸಚಿವ ಎಂ.ಪಿ.ಪ್ರಕಾಶ್ ಹಿಂದೂ ವಿರೋಧಿ ಧೋರಣೆ ಹೊಂದಿದ್ದಾರೆ. ಮೊನ್ನೆಯ ಮಂಗಳೂರು ಗಲಭೆಯಲ್ಲಿ ಗಾಯಗೊಂಡವರಿಗೆ ಈವರೆಗೆ ಪರಿಹಾರ ಬಂದಿಲ್ಲ. ಆದರೆ ಅಲ್ಪಸಂಖ್ಯಾತರ ಸಮಿತಿ ಮೂಲಕ ಮುಸ್ಲಿಂರಿಗೆ ಪರಿಹಾರ ನೀಡಲಾಗಿದೆ ಎಂದು ಮಹೇಂದ್ರ ಕುಮಾರ್ ಆರೋಪಿಸಿದರು.
(ಯುಎನ್ಐ)