ಸಿಬಿಐನಿಂದ ಗಣಿ ಲಂಚ ಪ್ರಕರಣದ ತನಿಖೆ : ಸಿಎಂ ಕತೆ?
ಬೆಂಗಳೂರು : 150 ಕೋಟಿ ರೂ.ಗಳ ಬಳ್ಳಾರಿ ಗಣಿ ಕಪ್ಪ ಹಗರಣ, ಇದೀಗ ಹೊಸ ತಿರುವು ಪಡೆದಿದೆ. ಈ ತಿರುವು ಜನರ ಕಣ್ಣೊರೆಸುವ ತಂತ್ರವೆಂಬ ವ್ಯಾಖ್ಯಾನ ಪ್ರತಿಪಕ್ಷಗಳಿಂದ ಕೇಳಿ ಬಂದಿದೆ.
ಹಗರಣದ ವಿಚಾರಣೆ ನಡೆಸುತ್ತಿರುವ ಆಯೋಗದ ನ್ಯಾಯಮೂರ್ತಿ ಯು.ಎಲ್.ಭಟ್, ಮುಂದಿನ ತನಿಖೆಗೆ ಸಿಬಿಐ ಅಧಿಕಾರಿಗಳ ನೆರವು ಕೋರಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಈವರೆಗೆ ನಮ್ಮ ಕೈಗೆ ಸಿಕ್ಕಿಲ್ಲ. ಹಗರಣದ ಸತ್ಯಾಸತ್ಯತೆಗಳ ಅರಿಯಲು, ಸಿಬಿಐ ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಕೆ.ಎನ್.ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿರುದ್ಧದ ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ, ವಿಧಾನಪರಿಷತ್ ಸದಸ್ಯ ಜನಾರ್ದನ ರೆಡ್ಡಿ ವಿಫಲರಾಗಿದ್ದಾರೆ ಎಂದಿರುವ ನಾಗೇಂದ್ರ ಕುಮಾರ್, ಆಯೋಗದ ನಿಯಂತ್ರಣದಲ್ಲೇ ಸಿಬಿಐ ತನಿಖೆ ನಡೆಯಲಿದೆ. ತನಿಖಾ ವರದಿಯನ್ನು ಆಯೋಗಕ್ಕೆ ಸಿಬಿಐ ಸಲ್ಲಿಸಲಿದೆ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಆಕ್ಷೇಪ : ಜನರ ಕಣ್ಣೊರೆಸಲು ಮುಖ್ಯಮಂತ್ರಿಗಳು ಈ ನಾಟಕ ಆಡುತ್ತಿದ್ದಾರೆ. ಸಿಬಿಐ ಸ್ವತಂತ್ರ ತನಿಖೆಗೆ ಅವಕಾಶ ಕಲ್ಪಿಸಬೇಕು. ಸಿಬಿಐ ತನಿಖಾ ವರದಿ ನೀಡಿದರೂ, ಕಡೆಗೆ ವರದಿ ಪ್ರಕಟಿಸುವುದು ಆಯೋಗವೇ. ಆಯೋಗ ನೀಡಿದ ವರದಿಯನ್ನು ಒಪ್ಪುವ ಅಥವಾ ನಿರಾಕರಿಸುವ ಅಧಿಕಾರ ಸರ್ಕಾರಕ್ಕೆ ಇದ್ದೇ ಇದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)