ಶಿವಾಜಿ ಫೋಟೋ ತೆರವು : ತಹಸೀಲ್ದಾರ್ ಮೇಲೆ ಹಲ್ಲೆ
ಬೀದರ್ : ಛತ್ರಪತಿ ಶಿವಾಜಿ ಭಾವಚಿತ್ರವಿದ್ದ ಫಲಕ ತೆರವುಗೊಳಿಸಿದ ಕಾರಣ, ಭಾಲ್ಕಿ ತಾಲ್ಲೂಕಿನ ಮೆಹಕರ್ ಗ್ರಾಮದ ಉದ್ರಿಕ್ತ ಜನರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದೆ.
ಮಂಗಳವಾರ ನಡೆದ ಈ ಘಟನೆಯಲ್ಲಿ ತಹಸೀಲ್ದಾರ್ ಮಾಲಿಕಪ್ಪ ಮಂಗಲಗಿ ಹಲ್ಲೆಗೊಳಗಾದವರು. ಅಲ್ಲದೆ ಇವರ ರಕ್ಷಣೆಗೆ ಧಾವಿಸಿದ ಹುಲಸೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಡೆವೆಪ್ಪ ಬನ್ನಿ ಅವರೂ ಹಲ್ಲೆಗೊಳಗಾಗಿದ್ದಾರೆ. ತಹಸೀಲ್ದಾರ್ ಜೀಪ್ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದಕ್ಕೆ ಬೆಂಕಿ ಹಚ್ಚಲಾಗಿದೆ.
ನಡೆದದ್ದಿಷ್ಟು : ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮೆಹಕರ್ ಗ್ರಾಮ ಮರಾಠಿ ಜನರೇ ಬಹುಸಂಖ್ಯಾತರಾಗಿರುವ ಊರು. ಕಳೆದ 15ದಿನಗಳ ಹಿಂದೆ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿ ಶಿವಾಜಿ ಭಾವಚಿತ್ರವಿರುವ ಫಲಕವೊಂದನ್ನು ನೆಡಲಾಗಿತ್ತು. ಇದು ಸಂಚಾರಕ್ಕೆ ಅಡಚಣೆ ಉಂಟುಮಾಡುವುದನ್ನು ಗಮನಿಸಿದ ತಹಸೀಲ್ದಾರ್, ತೆಗೆದುಹಾಕಲು ಆದೇಶಿಸಿದ್ದರು.
ತೆಗೆದು ಹಾಕಿದ ನಂತರ, ಶಿವಾಜಿ ಮಹಾರಾಜರಿಗೆ ಅವಮಾನ ಮಾಡಲಾಗಿದೆ ಎಂದು ಊರೆಲ್ಲ ಸುದ್ದಿ ಹರಡಲಾಗಿದೆ. ಸುದ್ದಿ ಹರಡಿದ ಮೇಲೆ ಊರು ಉದ್ರಿಕ್ತಗೊಂಡು, ಕಲ್ಲು ತೂರಾಟ ಕೂಡ ಸಂಭವಿಸಿದೆ.
(ಏಜನ್ಸೀಸ್)