ಧರ್ಮಾಧಾರಿತ ಮೀಸಲಾತಿ ವಿಚ್ಛಿದ್ರಕಾರಿ : ಅಡ್ವಾಣಿ
ಬೆಂಗಳೂರು : ಧರ್ಮಾಧಾರಿತ ಮೀಸಲಾತಿ ದೇಶವನ್ನು ಛಿದ್ರಛಿದ್ರಗೊಳಿಸುವಂಥದ್ದಾಗಿದ್ದು, ಇದನ್ನು ಕಲ್ಪಿಸಲು ಹೊರಟಿರುವ ಕೇಂದ್ರದ ಧೋರಣೆ ಖಂಡನೀಯ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ಬಿಜೆಪಿ ಭಾನುವಾರ(ನವೆಂಬರ್ 19)ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜವಾಹರಲಾಲ್ ನೆಹರೂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರೂ ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು. ಆದರೆ ಯುಪಿಎ ಸರ್ಕಾರ ಧರ್ಮದ ಆಧಾರದ ಮೇಲೆ ಜನಗಣತಿ ನಡೆಸುವ ಮೂಲಕ, ಮೀಸಲಾತಿನೀಡುವ ಯತ್ನ ನಡೆಸುತ್ತಿದೆ. ಬಿಜೆಪಿ ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಮುಸ್ಲಿಮರಿಗೆ ಶೈಕ್ಷಣಿಕ ಆದ್ಯತೆ ನೀಡಬೇಕು. ಇದು ಮದ್ರಸಾಗಳಿಂದ ಆಗದ ಕೆಲಸ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಯೋತ್ಪಾದನೆ ಯಾವುದೇ ಧರ್ಮದ ಜೊತೆಗೆ ಸಂಬಂಧ ಇಲ್ಲದ್ದು. ಯಾವ ಧರ್ಮವೂ ಭಯೋತ್ಪಾದನೆ ಪೋಷಿಸುವುದಿಲ್ಲ. ಆಡಳಿತ ನಡೆಸುವವರು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಿರ್ದಿಷ್ಟ ಮತ-ಧರ್ಮಗಳ ಜನರನ್ನು ಓಲೈಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)