ನ.20, 21ರಂದು ಬಸವನಗುಡಿಯಲ್ಲಿ ಕಡಲೆಕಾಯಿ ಮೆಲ್ಲೋಣ
ಬೆಂಗಳೂರು : ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಜರುಗುವ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್ 20 ಮತ್ತು 21ರಂದು ಜರುಗಲಿದೆ.
ಕಡಲೆಕಾಯಿ ಮಾರುವ ರೈತರು ಈಗಾಗಲೆ ಬುಲ್ಟೆಂಪಲ್ ರಸ್ತೆಯಲ್ಲಿ ಬಂದು ಜಮಾಯಿಸಿದ್ದಾರೆ. ಜನರಿಗೋ ಕಡಲೆಕಾಯಿ ಮೆಲ್ಲುವ, ಜಾತ್ರೆಯಲ್ಲಿ ಪಾಲ್ಗೊಳ್ಳುವ, ದೊಡ್ಡ ಗಣೇಶನ ಆಶೀರ್ವಾದ ಪಡೆಯುವ ಸಡಗರ.
ಮೊದಲು ಬುಲ್ಟೆಂಪಲ್ ಮಾತ್ರ ಜನಜಂಗುಳಿಯಿಂದ ತುಂಬುತ್ತಿತ್ತು. ಇತ್ತಿತ್ತಲಾಗಿ ಸುತ್ತಮುತ್ತಲಿನ ರಸ್ತೆಗಳಲ್ಲೆಲ್ಲ ಮಕ್ಕಳಿಗೆ ಆಟದ ಸಾಮಾನು, ಕಡಲೆಪುರಿ, ಬೆಂಡು, ಬತ್ತಾಸು, ಬಲೂನು, ಐಸ್ಕ್ರೀಮು ಇತ್ಯಾದಿ ಇತ್ಯಾದಿ.
ದೊಡ್ಡ ಗಣೇಶನ ದೇವಸ್ಥಾನದಲ್ಲಿ, ಪಕ್ಕದ ಬಸವಣ್ಣ ದೇಗುಲದಲ್ಲಿ ಸಾವಿರಾರು ಜನ ಜಮಾಯಿಸಿರುತ್ತಾರೆ. ಮಕ್ಕಳ ಬಗ್ಗೆ, ನಿಮ್ಮ ಪರ್ಸ್ ಬಗ್ಗೆ, ಕೈಲಿರುವ ಮೊಬೈಲ್ ಬಗ್ಗೆ ಎಚ್ಚರವಿರಲಿ. ಸುಮ್ಮನೆ ತಮಾಷೆಗಂತ ಬಂದ ಪಡ್ಡೆಗಳಿಂದ ದೂರವಿರುವುದು ಉತ್ತಮ.
ಇಂಥ ಪರಿಷೆ ಇನ್ನೊಂದು ವರುಷ ಮತ್ತೆ ಬರಲಾರದು. ಹಸಿ, ಹುರಿದ ಕಡಲೆಕಾಯಿ ನಿಮ್ಮ ಹೊಟ್ಟೆ ಸೇರಲಿ. ಕಡಲೆಕಾಯಿ ತಿಂದ ಮೇಲೆ ಸ್ವಲ್ಪ ಬೆಲ್ಲ ತಿನ್ನುವುದನ್ನೂ ಮರೆಯಬೇಡಿ.