ಕಾಂಗ್ರೆಸ್ ಮತ್ತು ಸೋನಿಯಾಗೆ ಉಮಾಭಾರತಿ ಜೈಕಾರ!
ಭೋಪಾಲ್ : ಕಾಂಗ್ರೆಸ್ ಮೇಲೆ, ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಕೆಂಡದ ಮಳೆ ಸುರಿಸುತ್ತಿದ್ದ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ರಾಗ ಬದಲಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಹಾಡಿ ಹೊಗಳಿರುವ ಅವರು, ಸೋನಿಯಾ ಬಗ್ಗೆ ಮೊದಲ ಸಲ ಮೆಚ್ಚುಗೆಯ ಮಾತನಾಡಿದ್ದಾರೆ. ಮಧ್ಯಪ್ರದೇಶದ ವಿಧಾನಸಭೆ ಪ್ರತಿಪಕ್ಷದ ನಾಯಕಿ ಜಮುನಾ ದೇವಿ ಮನೆಗೆ ತೆರಳಿದ್ದ ಉಮಾಭಾರತಿ, ಈ ಸಂದರ್ಭದಲ್ಲಿ ಬಿಜೆಪಿಯನ್ನು ಟೀಕಿಸಿದರು. ಪರಿಸ್ಥಿತಿ ಹೀಗೆಯೇ ಮುಂದುವರೆದರೇ, ಉಮಾ ಕಾಂಗ್ರೆಸ್ ಪ್ರವೇಶಿಸಿದರೂ ಅಚ್ಚರಿಯೇನಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಪ್ರೀತಿಗೆ ಕಾರಣ? : ವಿಧಾನಸಭೆಯ ಉಪಚುನಾವಣೆಯಾಂದರ ಸಂದರ್ಭದಲ್ಲಿ ಅ.30ರಂದು ಬಿಜೆಪಿ ಪರ ಮುಖಂಡರು, ಉಮಾ ಮೇಲೆ ಹಲ್ಲೆ ನಡೆಸಿದ್ದರು. ಆಗ ಕಾಂಗ್ರೆಸ್ ಉಮಾ ಪರ ನಿಂತಿತ್ತು. ಅಷ್ಟು ಮಾತ್ರವಲ್ಲದೇ, ವಿಧಾನಸಭೆಯಲ್ಲೂ ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿ, ಉಮಾಭಾರತಿ ಅವರ ಬೆಂಬಲಕ್ಕೆ ನಿಂತಿತ್ತು.
ಸೋನಿಯಾ ನಿರ್ದೇಶನದ ಮೇಲೆಯೇ ಕಾಂಗ್ರೆಸ್ ನಮ್ಮ ಬೆನ್ನಿಗೆ ನಿಂತಿದೆ ಎಂಬ ಭಾವನೆ ಉಮಾಭಾರತಿ ಅವರಲ್ಲಿದೆ. ಹೀಗಾಗಿ ಕಾಂಗ್ರೆಸ್ ಜೊತೆ ಪ್ರೀತಿ ಆರಂಭಗೊಂಡಿದೆ!
ಬಿಜೆಪಿ ಏನನ್ನುತ್ತದೆ? : ಈ ಮಧ್ಯೆ ಉಮಾಭಾರತಿಯನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸುವ ಪ್ರಶ್ನೆಯೇ ಇಲ್ಲ. ಅದೊಂದು ಮುಗಿದ ಅಧ್ಯಾಯ ಎಂದು ಬಿಜೆಪಿ ವರಿಷ್ಠರು ಸ್ಪಷ್ಟಪಡಿಸಿದ್ದಾರೆ.
(ಏಜನ್ಸೀಸ್)