‘ಮೈಸೂರು ಮಲ್ಲಿಗೆ’ ನಮ್ಮದೇ.. ಅವರೂ ಸಮ್ಮತಿಸಿದ್ದಾರೆ!
ಮೈಸೂರು : ‘ಮೈಸೂರು ಮಲ್ಲಿಗೆ’ ನಮ್ಮ ನೆಲದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮಾತಿಗೆ ಮನ್ನಣೆ ದೊರೆತಿದೆ. ಶೀಘ್ರದಲ್ಲೇ ಭೌಗೋಳಿಕ ಗುರುತಿನ(ಜಿಯೋಗ್ರಾಫಿಕಲ್ ಇಂಡಿಕೇಷನ್) ಕೀರ್ತಿಯೂ ದೊರೆಯಲಿದೆ.
ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದ ಪೇಟೆಂಟ್, ವಿನ್ಯಾಸ ಹಾಗೂ ಟ್ರೇಡ್ ಮಾರ್ಕ್ನ ಕಂಟ್ರೋಲರ್ ಜನರಲ್ ನೇತೃತ್ವದ ಉನ್ನತ ಸಮಿತಿ ಇದಕ್ಕೆ ಒಪ್ಪಿಗೆ ಸೂಚಿಸಿದೆ.
ಈ ಮಾನ್ಯತೆಗೆ ಉಡುಪಿ ಮಲ್ಲಿಗೆ ಹಾಗೂ ಹಡಗಲಿ ಮಲ್ಲಿಗೆಯನ್ನೂ ಶಿಫಾರಸು ಮಾಡಲಾಗಿದೆ. ಈ ಮೂರೂ ಬಗೆಯ ಮಲ್ಲಿಗೆಗಳನ್ನು ಆಯಾ ಪ್ರದೇಶಗಳೊಂದಿಗೆ ಗುರುತಿಸಬೇಕೆಂದು ತಜ್ಞರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪ್ರಸಕ್ತ ವರ್ಷದ ಜುಲೈನಲ್ಲೇ ಪೂರ್ಣಗೊಳಿಸಲಾಗಿತ್ತು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಮಕೃಷ್ಣಪ್ಪ ತಿಳಿಸಿದ್ದಾರೆ.
ಮೈಸೂರು-ಮಲ್ಲಿಗೆ, ಎಲ್ಲಿಂದೆಲ್ಲಿಗೆ...? : ಅರಮನೆಗಳ ನಗರ ಮೈಸೂರು, ದಸರಾ ಉತ್ಸವದಿಂದ ಎಷ್ಟು ವಿಶ್ವವಿಖ್ಯಾತವಾಗಿದೆಯೋ ಮಲ್ಲಿಗೆಯಿಂದಲೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಮೈಸೂರಿಗೂ ಮಲ್ಲಿಗೆಗೂ ಬಿಡಿಸಲಾಗದ ನಂಟು. ದಾಂಪತ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ತಮ್ಮ ‘ಮೈಸೂರ ಮಲ್ಲಿಗೆ’ ಕವನ ಸಂಕಲನದ ಮೂಲಕ ಮಲ್ಲಿಗೆ ಹಾಗೂ ಮೈಸೂರಿನ ನಂಟನ್ನು ಅಜರಾಮರಗೊಳಿಸಿದ್ದು ಮತ್ತೂ ವಿಶೇಷ.
(ದಟ್ಸ್ ಕನ್ನಡ ವಾರ್ತೆ)