ಬಿಜೆಪಿಯಲ್ಲಿ ಬಂಡಾಯ : ಸದಾನಂದಗೌಡ ಸ್ಥಾನಕ್ಕೆ ಕುತ್ತು?
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿರುಸಿನ ಪೈಪೋಟಿ ಆರಂಭವಾಗಿದ್ದು, ಹಾಲಿ ಅಧ್ಯಕ್ಷ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಸ್ಥಾನ ತ್ಯಜಿಸಬೇಕಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಂದು ಗುಂಪು ಸದಾನಂದಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸುವ ತಂತ್ರ ರೂಪಿಸುತ್ತಿದ್ದು, ಇನ್ನೊಂದು ಗುಂಪು ಅವರನ್ನೇ ಮುಂದುವರಿಸಬೇಕೆಂದು ಪಟ್ಟು ಹಿಡಿದಿದೆ.
ಸಂಸದ ಅನಂತ್ಕುಮಾರ್ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅನಂತ್ಕುಮಾರ್ ಅಧ್ಯಕ್ಷರಾಗುತ್ತಾರೋ ಇಲ್ಲವೋ ಅದು ಬೇರೆ ಮಾತು. ಆದರೆ ಸದಾನಂದಗೌಡ ಈ ಸ್ಥಾನದಲ್ಲಿ ಮುಂದುವರಿಯುವುದು ಸುಲಭವಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನೊಂದೆಡೆ ಸದಾನಂದಗೌಡ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದ್ದು, ಅನಿವಾರ್ಯವಾದರೆ ಚುನಾವಣೆ ಎದುರಿಸಲೂ ಸಿದ್ಧ ಎಂದು ಘೋಷಿಸಿದ್ದಾರೆ. ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದಾನಂದಗೌಡರ ಮುಂದುವರಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿಗಜಿಣಗಿ ವಿರೋಧ : ಸದಾನಂದಗೌಡ ಅಧ್ಯಕ್ಷರಾಗಿ ಮುಂದುವರಿಯುವುದನ್ನು ಸಂಸದ ರಮೇಶ್ ಜಿಗಜಿಣಗಿ ವಿರೋಧಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಎಲ್.ಕೆ.ಅಡ್ವಾಣಿ ಹಾಗೂ ಪಕ್ಷಾಧ್ಯಕ್ಷ ರಾಜ್ನಾಥ್ಸಿಂಗ್ಅವರನ್ನು ಭೇಟಿಮಾಡಿ, ಸದಾನಂದಗೌಡ ಒಳ್ಳೆಯವರೇ. ಆದರೆ ಎಲ್ಲ ಪ್ರದೇಶಗಳ ಹಾಗೂ ಎಲ್ಲ ಕಾರ್ಯಕರ್ತರ ಹಿತ ಕಾಪಾಡಲು ಅವರು ವಿಫಲವಾಗಿದ್ದಾರೆ. ಹಾಗಾಗಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಒತ್ತಾಯಿಸಿದ್ದಾರೆ.
(ಏಜನ್ಸೀಸ್)