ಮರಳು ಗಲಾಟೆ : ತೇಜಸ್ವಿನಿ-ಯೋಗೇಶ್ ಜಂಟಿ ಹೋರಾಟ
ಚನ್ನಪಟ್ಟಣ : ಮರಳು ಗಣಿಗಾರಿಕೆದಾರರ ವಿರುದ್ಧ ಶಾಸಕ ಸಿ.ಪಿ.ಯೋಗೇಶ್ವರ್-ಸಂಸದೆ ತೇಜಸ್ವಿನಿ ಶ್ರೀರಮೇಶ್ ಜಂಟಿ ಹೋರಾಟ ಆರಂಭಿಸ್ದಿದಾರೆ.
ಮರಳುಗಾರಿಕೆ ತೀವ್ರಗೊಂಡ ಕಾರಣ ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ನೇತೃತ್ವದಲ್ಲಿ ಮಂಗಳವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ಹಾಗೂ ಶಾಸಕ ಸಿ.ಪಿ.ಯೋಗೋಶ್ವರ್ ಕೂಡ ಉಪಸ್ಥಿತರಿದ್ದರು.
ತಾಲ್ಲೂಕಿನ ವಾಲೇತೋಪು, ಕೂಡ್ಲೂರು, ಮಳೂರುಪಟ್ಟಣ, ಎಸ್.ಎಂ.ದೊಡ್ಡಿ ಮೊದಲಾದೆಡೆ ಪರಿಶೀಲನೆ ನಡೆಸುತ್ತಿದ್ದಾಗ ಗಣಿಗಾರಿಕೆದಾರರು, ಹತ್ತಾರು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದ್ದರೂ ನೀವು ಕ್ರಮ ಕೈಗೊಂಡಿಲ್ಲ. ಈಗ ಏಕೆ ಈ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದೀರಿ. ಮರಳು ಲಾರಿಗಳಿಂದ ಸುಂಕ ವಸೂಲಿ ಮಾಡಿದ ನಿಮಗೆ ಗಣಿಗಾರಿಕೆ ನಿಷೇಧಿಸುವ ನೈತಿಕತೆ ಇಲ್ಲ ಎಂದು ಆಪಾದನೆ ಮಾಡಿದರು.
ಇದರಿಂದ ವಿಚಲಿತರಾದ ಸಂಸದೆ ತೇಜಸ್ವಿನಿ ಶ್ರೀರಮೇಶ್ ಹಾಗೂ ಶಾಸಕ ಸಿ.ಪಿ.ಯೋಗೋಶ್ವರ್ ಗಣಿಗಾರಿಕೆದಾರರ ಮೇಲೆ ಹರಿಹಾಯ್ದರು. ಪರಿಸ್ಥಿತಿ ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು. ಇದಕ್ಕೆ ಬಗ್ಗದ ಸಂಸದೆ ತೇಜಸ್ವಿನಿ, ಗಣಿಗಾರಿಕೆ ನಡೆಸುತ್ತಿರುವವರ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಗಣಿಗಾರಿಕೆ ತಡೆದೇ ತೀರುತ್ತೇನೆ ಎಂದು ಗುಡುಗಿದರು.
(ದಟ್ಸ್ ಕನ್ನಡ ವಾರ್ತೆ)