ಲಾಭದ ಹುದ್ದೆ ಮಸೂದೆಗೆ ಅಸ್ತು : ಶಾಸಕರಿಗೆ ಖುಷಿ
ಬೆಂಗಳೂರು : ಲಾಭದಾಯಕ ಹುದ್ದೆ ಮಸೂದೆಗೆ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅಂಗೀಕಾರ ನೀಡಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಂ.ಪಿ.ಪ್ರಕಾಶ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕರ್ನಾಟಕ ಶಾಸನಸಭೆ(ಶಾಸಕರ ಅನರ್ಹತೆ ರದ್ದು) ಮಸೂದೆ 2006ಕ್ಕೆ, ನ.4ರಂದು ರಾಜ್ಯಪಾಲರು ಸಮ್ಮತಿ ಸೂಚಿಸಿದ್ದಾರೆ. ಸಭಾಧ್ಯಕ್ಷ, ಉಪಾ ಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ, ರಾಜ್ಯಸಚಿವ, ಉಪ ಸಚಿವರು ಲಾಭದಾಯಕ ಹುದ್ದೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸೇರುವುದಿಲ್ಲ ಎಂದರು.
ಜೊತೆಗೆ ಮಸೂದೆ ಪ್ರಕಾರ ನಗರಸಭೆ ಅಧ್ಯಕ್ಷ, ಮಹಾನಗರ ಪಾಲಿಕೆ ಮೇಯರ್, ಉಪಮೇಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಗಳು ಲಾಭದಾಯಕ ಹುದ್ದೆಗಳಲ್ಲ ಎಂದು ಎಂ.ಪಿ.ಪ್ರಕಾಶ್ ಅಭಿಪ್ರಾಯಪಟ್ಟರು.
ಲಾಭದಾಯಕ ಹುದ್ದೆಯ ವಿವಾದ, ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈಗ ಕರ್ನಾಟಕದ ಶಾಸಕರು ಹೊಸ ಮಸೂದೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾವುದೇ ಅಳುಕಿಲ್ಲದೇ, ನಿಗಮ-ಮಂಡಳಿಗಳಲ್ಲಿ ಸ್ಥಾನ ಪಡೆಯಲು ಮುಂದಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)