ಮು.ನ್ಯಾಯಮೂರ್ತಿಗೆ ಕನ್ನಡ ಇಷ್ಟ, ದೇವೇಗೌಡ್ರಿಗೆ ಕಷ್ಟ
ಬೆಂಗಳೂರು : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ಕನ್ನಡ ಭಾಷಣದ ಮೂಲಕ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ ಅದೇ ಸಮಾರಂಭದಲ್ಲಿದ್ದ ಮಣ್ಣಿನ ಮಗ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಆಂಗ್ಲ ಭಾಷಣದಿಂದ, ಇರುಸುಮುರುಸಿಗೆ ಕಾರಣರಾಗಿದ್ದಾರೆ.
ಹೈಕೋರ್ಟ್ನ ಸುವರ್ಣ ಮಹೋತ್ಸವ ಮತ್ತು ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ನನ್ನ ಮಾತೃಭೂಮಿ ಕೇರಳ. ಆದರೆ ಕನ್ನಡ ತಾಯಿ ನನಗೆ ಎದೆ ಹಾಲುಣಿಸಿ ಸಾಕಿದ್ದಾಳೆ. ಅವಳನ್ನು ಮರೆಯುವುದಿಲ್ಲ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು ಮಾತನಾಡುತ್ತ, ಈ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಹಾಜರಿದ್ದಾರೆ. ಹೀಗಾಗಿ ಇಂಗ್ಲಿಷ್ನಲ್ಲಿಯೇ ಮಾತನಾಡುತ್ತೇನೆ. ಯಾರೂ ಧಿಕ್ಕಾರ ಕೂಗುವುದು ಬೇಕಾಗಿಲ್ಲ.. ಇಂಗ್ಲಿಷ್ನಿಂದ ಎಲ್ಲೆಡೆ ಸಂವಹನ ಸುಲಭ ಎಂದು ಹೇಳಿದರು.
ರಾಜ್ಯಪಾಲರ ಕನ್ನಡ ಭಾಷಣ : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಟಿ.ಎನ್.ಚತುರ್ವೇದಿ ಕನ್ನಡ ಭಾಷಣ ಮಾಡಿದರು. ಆಂಗ್ಲ ಲಿಪಿಯಲ್ಲಿ ಕನ್ನಡವನ್ನು ಬರೆದುಕೊಂಡದ್ದರಿಂದ, ಅಲ್ಲಲ್ಲಿ ತೊಡಕುಗಳು ಎದುರಾದವು. ಆದರೂ ಅವರ ಕನ್ನಡ ಭಾಷಣ ಕೇಳಿ, ರಾಜ್ಯದ ಜನತೆ ಸಂತಸಗೊಂಡರು.
(ದಟ್ಸ್ ಕನ್ನಡ ವಾರ್ತೆ)