ಐಟಿ ಮೇಳ : ಐಟಿ ಪರಿಣತರ ಸೃಷ್ಟಿಗೆ ಕುಮಾರಸ್ವಾಮಿ ಕರೆ
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರ ಅದರಲ್ಲೂ ಕರ್ನಾಟಕ ರಾಜ್ಯ ವಿಶ್ವದ ಗಮನ ಸೆಳೆದಿದೆ. ಐಟಿ ಕ್ರಾಂತಿಗೆ ಪೂರಕವಾಗುವಂತೆ ರಾಷ್ಟ್ರದಲ್ಲಿ ವಿದ್ಯಾರ್ಥಿಗಳ ಪ್ರಾಥಮಿಕ ಪಠ್ಯವನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಐಟಿ ಡಾಟ್ ಇನ್-2006ಕ್ಕೆ ಚಾಲನೆ ನೀಡಿದ ಅವರು, ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಐಟಿ ಉದ್ಯಮವನ್ನು ಬೆಂಗಳೂರು ಜೊತೆಗೆ, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಗುಲ್ಬರ್ಗದಲ್ಲಿ ಬೆಳೆಸಲು ಸರ್ಕಾರ ಪ್ರಯತ್ನಿಸಲಿದೆ ಎಂದರು.
ಬೆಂಗಳೂರಿನ ಒತ್ತಡ ತಗ್ಗಿಸಲು, ರಾಜಧಾನಿ ಸುತ್ತಲೂ ಐದು ನಗರಗನ್ನು ಅಭಿವೃದ್ಧಿ ಪಡಿಸಲಾಗುವುದು. ಅವುಗಳಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾಗುವಂತೆ ಜ್ಞಾನ ನಗರ ರೂಪುಗೊಳ್ಳಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ಸಚಿವ ದೇಬೇಶ್, ಐಟಿ-ಬಿಟಿ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದರು. ಸಮಾರಂಭದಲ್ಲಿ ಬ್ರಿಟನ್ ಹೈ ಕಮೀಷನರ್ ಮೈಕಲ್ ಆರ್ಥರ್, ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ನಿರ್ದೇಶಕ ಬಿ.ವಿ.ನಾಯ್ದು ಮತ್ತಿತರರು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)