ಹೊಟೇಲ್ ಸಿಬ್ಬಂದಿ Vs ಸಿಎಂ ಪುತ್ರ ನಿಖಿಲ್ ಮಧ್ಯೆ ಕದನ
ಎರಡೂ ಪಾರ್ಟಿಗಳಿಂದ ಪೊಲೀಸರಿಗೆ ದೂರು..
ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಸೇರಿದಂತೆ ಮೂವರು ಯುವಕರು, ದಾಂಧಲೆ ನಡೆಸಿದ್ದಾರೆ ಎಂದು ಸ್ಥಳೀಯ ರೆಸ್ಟೋರೆಂಟ್(ಶಿವಾಜಿನಗರದ ಎಂಪೈರ್ ಹೋಟೆಲ್)ನ ಆಡಳಿತ ವರ್ಗ ಗುರುವಾರ ದೂರು ದಾಖಲಿಸಿದೆ.
ಈ ಮೂವರು ಯುವಕರ ಗುಂಪು, ಹೋಟೆಲ್ನ ವಸ್ತುಗಳನ್ನು ಧ್ವಂಸಗೊಳಿಸಿ, ಗಾಜುಗಳನ್ನು ಮುರಿದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಮತ್ತೊಂದು ಕಡೆ ನಿಖಿಲ್ ಗೌಡ, ಹೋಟೆಲ್ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಕಾರನ್ನು ಹಾನಿ ಮಾಡಿದ್ದಾರೆ. ಗುರುವಾರ ಬೆಳಗಿನ ಜಾವ 4ರ ಸುಮಾರಿನಲ್ಲಿ ಗೆಳೆಯರೊಂದಿಗೆ ಹೋಟೆಲ್ಗೆ ಹೋಗಿದ್ದೆವು. ಊಟ ಕೇಳಿದರೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡು ದೂರುಗಳು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಎಸಿಪಿ ರಫೀಕ್ ಮುಲ್ಲಾ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಬಿಪಿನ್ ಗೋಪಾಲಕೃಷ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಡಿ.ಕೆ.ಶಿ. ಪ್ರತಿಕ್ರಿಯೆ : ಕಾನೂನು ಎಲ್ಲರಿಗೂ ಒಂದೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರನ ರಕ್ಷಣೆಗಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ನ್ಯಾಯಯುತ ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)