ರಾಷ್ಟ್ರಕವಿ ಪ್ರಶಸ್ತಿಗೆ ಅರ್ಹರು ಯಾರೂ ಇಲ್ಲ --ನಿಸಾರ್
ಬೆಂಗಳೂರು : ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡುವುದಾದರೆ ದ.ರಾ.ಬೇಂದ್ರೆಯವರಿಗೆ ಮರಣೋತ್ತರವಾಗಿ ನೀಡಬೇಕು. ಅವರನ್ನು ಹೊರತುಪಡಿಸಿ, ಬೇರೆ ಯಾರಿಗೆ ನೀಡಿದರೂ, ಪ್ರಶಸ್ತಿಯ ಮೌಲ್ಯ ಕುಸಿಯುತ್ತದೆ ಎಂದು ಕವಿ ನಿಸಾರ್ ಅಹಮದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸುವರ್ಣ ಕರ್ನಾಟಕ ವರ್ಷದಲ್ಲಿ ರಾಷ್ಟ್ರಕವಿ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ಸ್ವಾಗತಾರ್ಹ. ಕವಿಗೆ ಸಾವಿದ್ದರೂ, ಅವನ ಸಾಹಿತ್ಯಕ್ಕೆ ಸಾವಿಲ್ಲ ಎನ್ನುವ ವಿಶ್ವಾಸವಿದ್ದರೆ, ದ.ರಾ.ಬೇಂದ್ರೆ ಈ ಪ್ರಶಸ್ತಿಗೆ ಸೂಕ್ತ ಆಯ್ಕೆ. ಸದ್ಯದ ಯಾವ ಸಾಹಿತಿಯೂ ರಾಷ್ಟ್ರಕವಿ ಪ್ರಶಸ್ತಿ ಪಡೆಯುವ ಅರ್ಹತೆ ಪಡೆದಿಲ್ಲ ಎಂದರು.
ನಾನು ಈ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಸದಸ್ಯನಾಗಿದ್ದೇನೆ. ನಮ್ಮ ನಡುವಿನ ಸಾಹಿತಿಯಾಬ್ಬರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡುವ ಪ್ರಸ್ತಾಪಗಳನ್ನು ನಾನು ವಿರೋಧಿಸುತ್ತೇನೆ ಎಂದು ನಿಸಾರ್ ಅಹಮದ್ ಖಚಿತವಾಗಿ ಹೇಳಿದರು.
ಪ್ರಶಸ್ತಿ ಸದ್ಯದಲ್ಲಿಯೇ ಪ್ರಕಟ : ಇನ್ನೊಂದು 6-7ದಿನಗಳಲ್ಲಿ ಮೂರನೇ ರಾಷ್ಟ್ರಕವಿ ಪ್ರಶಸ್ತಿಯನ್ನು ಪ್ರಕಟಿಸುವುದಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ದೇ.ಜವರೇಗೌಡ ಹೇಳಿದ್ದಾರೆ.
ಪ್ರಶಸ್ತಿಗೆ ಕವಿ ಜಿ.ಎಸ್.ಶಿವರುದ್ರಪ್ಪ, ಚಂದ್ರಶೇಖರ ಕಂಬಾರ, ಚೆನ್ನವೀರ ಕಣವಿ, ನಿಸಾರ್ ಅಹಮದ್ ಹೆಸರುಗಳು ಕೇಳಿ ಬರುತ್ತಿವೆ.
(ದಟ್ಸ್ ಕನ್ನಡ ವಾರ್ತೆ)