ಕರ್ನಾಟಕದಲ್ಲೂ ಸಾವಿನ ಖಾತೆ ತೆರೆದ ಡೆಂಗ್ಯು ಮಾರಿ?
ರಾಜಧಾನಿ ನಗರಿ ದೆಹಲಿಯಲ್ಲಿ 886ಮಂದಿಗೆ ಡೆಂಗ್ಯು ಜ್ವರ, 21 ಸಾವು.
ಬಿಜಾಪುರ : ರಾಷ್ಟ್ರದ ಜನರನ್ನು ಕಂಗೆಡಿಸುತ್ತಿರುವ ಡೆಂಗ್ಯು ಎಂಬ ಮಾರಿ ಕರ್ನಾಟಕಕ್ಕೂ ಕಾಲಿಟ್ಟಿದೆ. ಬಿಜಾಪುರದಲ್ಲಿ ಮೃತಪಟ್ಟಿರುವ ವ್ಯಕ್ತಿಯ ಸಾವಿಗೆ ಡೆಂಗ್ಯು ಜ್ವರವೇ ಕಾರಣ ಎಂದು ಅನುಮಾನಪಡಲಾಗಿದೆ.
ಮೃತಪಟ್ಟಿರುವ ಬಾಬಾ ಪಟೇಲ ಎಂಬ 27ವರ್ಷದ ಯುವಕ, ಕಳೆದ ಎರಡುಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತನ ಸಾವಿನಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು, ನಗರಸಭೆಯ ಬೇಜವಾಬ್ದಾರಿ ವರ್ತನೆ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ.
ಇಲ್ಲಿನ ನಗರ ಸಭೆ, ನೈರ್ಮಲ್ಯವನ್ನು ಮರೆತಿದೆ. ಸೊಳ್ಳೆಗಳ ಸಂಖ್ಯೆ ಹೆಚ್ಚಿದ್ದು, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಮಧ್ಯೆ ಗುಲ್ಬರ್ಗದಲ್ಲೂ ಮೂರುವರ್ಷದ ಮಗುವೊಂದು ಡೆಂಗೆಯಿಂದ ಬಳಲುತ್ತಿದೆ ಎನ್ನಲಾಗಿದೆ.
ನವದೆಹಲಿ ವರದಿ : ರಾಜಧಾನಿ ನಗರಿಯಲ್ಲಿ ಡೆಂಗ್ಯು ಪೀಡಿತರ ಸಂಖ್ಯೆ 886ಕ್ಕೆ ಹೆಚ್ಚಿದೆ. ಮೃತರ ಸಂಖ್ಯೆ 21 ತಲುಪಿದೆ. ಕೊಲ್ಕತ್ತಾ, ಮಹಾರಾಷ್ಟ್ರ, ಆಂಧ್ರದಲ್ಲೂ ಡೆಂಗ್ಯು ಕಂಡು ಬಂದಿದೆ.
(ಏಜನ್ಸೀಸ್)