ಸಿದ್ಧಲಿಂಗಯ್ಯ: ಆಗ ದಲಿತೋದ್ಧಾರ,ಈಗ ಕನ್ನಡೋದ್ಧಾರ!
ಸಿದ್ಧಲಿಂಗಯ್ಯ:
ಆಗ
ದಲಿತೋದ್ಧಾರ,ಈಗ
ಕನ್ನಡೋದ್ಧಾರ!
ಕನ್ನಡ
ಅಭಿವೃದ್ಧಿ
ಪ್ರಾಧಿಕಾರಕ್ಕೆ
ಸಿದ್ಧಲಿಂಗಯ್ಯ
ಅವರಿಂದ
ಜೀವ
ಬರಬಹುದೇ?
ಹಿಂದಿನ ಅಧ್ಯಕ್ಷ ಬಿ.ಎ.ಇದಿನಬ್ಬ ಅವರ ಆಡಳಿತಾವಧಿ ಮುಗಿದು ಮೂರು ತಿಂಗಳಾಗಿದ್ದು, ಅಂದಿನಿಂದಲೂ ಹೊಸ ಅಧ್ಯಕ್ಷರ ಸ್ಥಾನಕ್ಕೆ ತೆರೆಮರೆಯಲ್ಲಿ ಎಲ್ಲಿಲ್ಲದ ಪೈಪೋಟಿ ನಡೆದಿತ್ತು. ಸ್ಪರ್ಧಿಗಳ ಸಾಲಿನಲ್ಲಿ ಸಿದ್ಧಲಿಂಗಯ್ಯನವರ ಹೆಸರೇ ಇರಲಿಲ್ಲವಾದರೂ ಅವರ ಆಯ್ಕೆ ನಡೆದಿದ್ದು, ಸಾಂಸ್ಕೃತಿಕ ಲೋಕದಲ್ಲಿ ಅಚ್ಚರಿ ಉಂಟುಮಾಡಿದೆ.
ಈ ಸ್ಥಾನಕ್ಕೆ ಲೇಖಕ ಡಾ.ನಲ್ಲೂರು ಪ್ರಸಾದ್, ಕವಿ ಪ್ರೊ.ದೊಡ್ಡರಂಗೇಗೌಡ, ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಹಾಗೂ ಕಥೆಗಾರ ಕುಂ.ವೀರಭದ್ರಪ್ಪ ಅವರ ಹೆಸರುಗಳು ಕೇಳಿ ಬಂದಿದ್ದವು. ಈ ಪಟ್ಟಿಯಲ್ಲಿ ಬಹುತೇಕರು ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಇರುವುದರಿಂದ ಅವರನ್ನೇ ಪರಿಗಣಿಸಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಎಲ್ಲ ಲೆಕ್ಕಾಚಾರಗಳನ್ನು ಮೀರಿ ಸಿದ್ಧಲಿಂಗಯ್ಯ ನೇಮಕಕ್ಕೆ ಅಸ್ತು ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರೊ.ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಅವರೊಂದಿಗೆ ಸೇರಿ ದಲಿತ ಸಂಘರ್ಷ ಸಮಿತಿ ಸ್ಥಾಪನೆಗೆ ಕಾರಣವಾದ ಡಾ.ಸಿದ್ಧಲಿಂಗಯ್ಯ, ಅದಕ್ಕೆ ಚಳವಳಿ ಸ್ವರೂಪ ತಂದುಕೊಟ್ಟವರಲ್ಲಿ ಪ್ರಮುಖರು. ‘ಹೊಲೆಮಾದಿಗರ ಹಾಡು’ ಎಂಬ ಕೃತಿ ರಚಿಸಿ, ದಲಿತರ ನೋವು ನಲಿವುಗಳಿಗೆ ದನಿಯಾದವರು. ಆದರೆ ದಲಿತ ಸಂಘರ್ಷ ಸಮಿತಿ ಒಡೆದು ಹೋಳಾದಾಗ ತೀವ್ರ ನೊಂದವರು. ಒಟ್ಟು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಅವರು, ಕನ್ನಡ ಅಭಿವೃದ್ಧಿ ಕುರಿತು ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದಾರೆ.
ಸಿದ್ಧಲಿಂಗಯ್ಯ, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಭಾರಿ ನಿರ್ದೇಶಕರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು