ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಡಿಂಡಿಮ : ಬನವಾಸಿ ಬಳಗದಿಂದ ‘ಸಿಂಹಗನ್ನಡಿ’!!!

By Staff
|
Google Oneindia Kannada News

ಕನ್ನಡ ಡಿಂಡಿಮ : ಬನವಾಸಿ ಬಳಗದಿಂದ ‘ಸಿಂಹಗನ್ನಡಿ’!!!
ಕನ್ನಡಪರ ಜಾಗೃತಿಗಾಗಿ ಬನವಾಸಿ ಬಳಗ ‘ಸಿಂಹಗನ್ನಡಿ’ ಕಾರ್ಯಕ್ರಮವನ್ನು, ಫೆ.12ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಏರ್ಪಡಿಸಿದೆ. ನಾಡು-ನುಡಿಯ ಹಿತಕಾಯುವ ಮಾರ್ಗಗಳು ಈ ಕಾರ್ಯಕ್ರಮದಲ್ಲಿ ಹೊರಹೊಮ್ಮುವ ಸಾಧ್ಯತೆಗಳಿವೆ. ಎಲ್ಲ ಕನ್ನಡಿಗರಿಗೂ ಪ್ರೀತಿಯ ಆಹ್ವಾನ.

ಪಂಚತಂತ್ರದ ಒಂದು ಕಥೆಯಲ್ಲಿ, ಸಿಂಹದ ಮರಿಯೊಂದು ನರಿಗಳ ಗುಂಪಿನಲ್ಲಿ ಆಕಸ್ಮಿಕವಾಗಿ ಬೆರೆತು ಅಲ್ಲಿಯೇ ಬೆಳೆಯುತ್ತದೆ. ಅದು ಜನ್ಮತಃ ಸಿಂಹವೇ ಆದರೂ ನರಿಮರಿಗಳೊಡನೆ ಬೆಳೆಯುತ್ತ ಅವುಗಳ ಹಾಗೆಯೇ ತನ್ನ ಸ್ವಭಾವವನ್ನು ರೂಪಿಸಿಕೊಳ್ಳುತ್ತದೆ. ಹೇಡಿತನ, ದುರ್ಬಲಗಳಿಂದ ತುಂಬಿದ ಆ ಸಿಂಹದ ಮರಿಗೆ ತಾನು ಎಷ್ಟು ಬಲಶಾಲಿ ಎಂಬ ಅರಿವು ಇರುವುದಿಲ್ಲ. ಒಮ್ಮೆ ಈ ಸಿಂಹದ ಮರಿಯನ್ನು ಭೇಟಿಯಾದ ಮತ್ತೊಂದು ಸಿಂಹ, ಈ ಮರಿ ಭಯದಿಂದ ಓಡುವುದನ್ನು ಕಂಡು, ಅದನ್ನು ತಡೆದು ನೀನು ಸಿಂಹದ ಮರಿ, ಧೈರ್ಯಶಾಲಿ, ಶಕ್ತಿಶಾಲಿ, ಕಾಡಿನ ರಾಜ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುತ್ತದೆ. ಈ ಮರಿಗೋ, ನಂಬಿಕೆಯೇ ಬಾರದು. ಕಡೆಗೆ ಸಿಂಹವು ಈ ಮರಿಯನ್ನು ಸಮೀಪದ ಕೊಳಕ್ಕೆ ಕರೆದೊಯ್ದು ಕೊಳದ ನೀರಿನಲ್ಲಿ ತನ್ನ ಪ್ರತಿಬಿಂಬ ನೋಡಿಕೊಳ್ಳಲು ಹೇಳುತ್ತದೆ. ಹಾಗೆ ನೋಡಿಕೊಂಡಾಗ, ಈ ಸಿಂಹದ ಮರಿಗೆ ತನ್ನತನದ ಅರಿವಾಗುತ್ತದೆ. ಅಂದಿನಿಂದ ಜಾಗೃತಗೊಂಡ ಆ ಮರಿಸಿಂಹ ಧೀರನಾಗಿ ಜೀವಿಸಿ ಕಡೆಗೊಮ್ಮೆ ಕಾಡಿನ ರಾಜನಾಗುತ್ತದೆ!

ಇತಿಹಾಸದ ಪುಟಗಳನ್ನೊಮ್ಮೆ ತಿರುಗಿಸಿ ನೋಡಿದರೆ, ನಮ್ಮ ಕನ್ನಡ ನಾಡಿನ ಚರಿತೆಯೆಲ್ಲ ಹೊನ್ನಾಕ್ಷರದಿಂದ ವಿರಚಿತವಾಗಿರುವುದು ಗೋಚರಿಸುತ್ತದೆ. ಹೊಯ್ಸಳ, ಚಾಲುಕ್ಯ, ಕದಂಬ, ರಾಷ್ಟ್ರಕೂಟರೇ ಮೊದಲಾದ ಧೀರ ರಾಜವಂಶಗಳಾಳಿದ, ಶ್ರೀ ಕೃಷ್ಣದೇವರಾಯ, ಅಮೋಘವರ್ಷ ನೃಪತುಂಗ, ಚೆನ್ನಮ್ಮ, ಪುಲಿಕೇಶಿಯೇ ಮೊದಲಾದ ಧೀರೋದಾತ್ತ ದೊರೆಗಳ, ರಾಘವ, ಪಂಪ, ರನ್ನರಾದಿ ಕವಿಕುಲ ಅಲಂಕೃತ, ದಾಸ ಸಾಹಿತ್ಯ, ವಚನ ಸಾಹಿತ್ಯ, ಜೈನ ಸಾಹಿತ್ಯಗಳಿಂದ ಸಮೃದ್ಧವಾದ ಸಾಹಿತ್ಯ ಪರಂಪರೆಯ ಚಿನ್ನದ ಪುಟಗಳು ತುಂಬಿವೆ.

ದಕ್ಷಿಣದ ಶ್ರೀಲಂಕೆಯಿಂದ ಉತ್ತರದ ನೇಪಾಳದವರೆಗೂ, ಪೂರ್ವದ ಬಂಗಾಳದಿಂದ ಪಶ್ಚಿಮದ ಗುಜರಾತಿನವರೆಗೂ ದಿಗ್ವಿಜಯ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿ ಅಲ್ಲೂ ರಾಜ್ಯಭಾರ ಮಾಡಿ ಸಾವಿರಾರು ಶಾಸನಗಳನ್ನು ಬರೆಸಿ ಇತಿಹಾಸದಲ್ಲಿ ಶಾಶ್ವತ ಮುದ್ರೆ ಒತ್ತಿದ ಕ್ಷತ್ರಿಯರು ನಾವು. ಭಾರತದ ಇತಿಹಾಸವನ್ನು ವೀರತೇಜಸ್ಸಿನಿಂದ ಉಜ್ವಲಗೊಳಿಸಿದ ಕನ್ನಡಿಗರ ಕುಲ ನಮ್ಮದು. ಇಂತಹ ಧೀರರಾದ ನಾವು ಇಂದು ಹೇಗಿದ್ದೇವೆ?

ನರಿಗುಂಪಿನಲ್ಲಿ ಬೆರೆತು ತನ್ನತನವ ಮರೆತ ಸಿಂಹದ ಮರಿಯಂತೆಯೇ ನಮ್ಮ ನಾಡಿನ ಕನ್ನಡಿಗರು ಇಂದು ಮೈಮರೆತಿದ್ದೇವೆ. ನಮ್ಮ ನೈಜ ಬಲ ಮಸುಕಾಗಿದೆ.

ಇಂತಹ ಸಂದರ್ಭದಲ್ಲಿ ಕನ್ನಡದ ಸಿಂಹದ ಮರಿಗಳಿಗೆ ಜಾಗೃತಿಯ ಕನ್ನಡಿ ಹಿಡಿಯುವ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ವೃತ್ತಿಪರರ ಕನ್ನಡ ಸಂಘಟನೆಯಾದ ಬನವಾಸಿ ಬಳಗವು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವೇ ‘ಸಿಂಹಗನ್ನಡಿ’. ನಿರಂತರ ಜಾಗೃತಿಯ ಔಚಿತ್ಯದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮ ಸರಣಿ ರೂಪದಲ್ಲಿ ನಡೆಯಲಿದೆ.

ಸರಣಿಯ ಮೊಟ್ಟಮೊದಲ ಕಾರ್ಯಕ್ರಮ ಭಾನುವಾರ ಫೆಬ್ರವರಿ 12ರಂದು, ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿರುವ ಪಂಪ ಸಭಾಂಗಣದಲ್ಲಿ ನಡೆಯಲಿದೆ.

ಈ ನಿಮಿತ್ತ ನಾಡಿನ ಹಿರಿಯ ಕನ್ನಡ ಪರ ಹೋರಾಟಗಾರರೂ, ಚಿಂತಕರೂ, ವಿದ್ವಾಂಸರೂ ಆದ ಡಾ. ಪಿ.ವಿ.ನಾರಾಯಣರವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಕನ್ನಡತನ, ರಾಷ್ಟ್ರೀಯತೆ ಮತ್ತು ಮುಂದಿನ ದಾರಿಗಳ ಬಗ್ಗೆ ಅವರು ಜಾಗೃತಿ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಾಡಿನ ಎಲ್ಲ ಕನ್ನಡಿಗರನ್ನು ಬನವಾಸಿ ಬಳಗ ಸ್ವಾಗತಿಸುತ್ತದೆ.

ಸಿಂಹಗನ್ನಡಿ ಕಾರ್ಯಕ್ರಮ ನಡೆಯುವ ಸ್ಥಳ :
ಪಂಪ ಸಭಾಂಗಣ, ಪಂಪ ಮಹಾಕವಿ ರಸ್ತೆ, ಕನ್ನಡ ಸಾಹಿತ್ಯ ಪರಿಷತ್ತು ,
ಚಾಮರಾಜಪೇಟೆ, ಬೆಂಗಳೂರು-560018.

ದಿನಾಂಕ : ಭಾನುವಾರ ಫೆಬ್ರವರಿ 12, 2006

ಸಮಯ : ಮಧ್ಯಾಹ್ನ 03.00 ಗಂಟೆಯಿಂದ ಸಂಜೆ 04.30ರವರೆಗೆ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X