ಸಮ್ಮಿಶ್ರ ಸರ್ಕಾರದ ರಿಪೇರಿಗೆ ಸಮನ್ವಯ ಸಮಿತಿ ರಚನೆ
ಬೆಂಗಳೂರು : ರಾಜ್ಯದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸುಸೂತ್ರ ಆಡಳಿತಕ್ಕೆ ಪೂರಕವಾಗುವಂತೆ ಕಾಂಗ್ರೆಸ್ ಸಮನ್ವಯ ಸಮಿತಿಯನ್ನು ರಚಿಸಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದು ಹದಿನೈದು ತಿಂಗಳಾದ ನಂತರ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎ.ಕೆ.ಆಂಟನಿಯನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ.
ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಸಚಿವ ಮಲ್ಲಿಕಾರ್ಜುನ ಖರ್ಗೆ, ಸಿ.ಕೆ.ಜಾಫರ್ ಷರೀಫ್, ಶಾಮನೂರು ಶಿವಶಂಕರಪ್ಪ, ಡಿ.ಬಿ.ಚಂದ್ರೇಗೌಡ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುವರು. ಅದೇ ರೀತಿ ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ ಸರ್ಕಾರದ ಮಟ್ಟದಲ್ಲಿ ಮತ್ತೊಂದು ಸಮತಿಯನ್ನು ರಚಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್ ಮತ್ತು ಕೆ.ಶ್ರೀನಿವಾಸ ಗೌಡ ಸಮತಿಯ ಸದಸ್ಯರಾಗಿದ್ದಾರೆ.
ಇದೇ ಮಾದರಿಯಲ್ಲಿ ಜೆಡಿಎಸ್ ಸಮಿತಿ ರಚಿಸಲಿದ್ದು, ಪದಾಧಿಕಾರಿಗಳ ಪಟ್ಟಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಿದೆ. ಸಮನ್ವಯ ಸಮತಿಯ ಮೊದಲ ಸಭೆ ಆ.17ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ಪಕ್ಷಗಳ ಮಧ್ಯೆ ಈ ಸಮಿತಿಗಳು ಸೌಹಾರ್ದಯುತ ಸಂಬಂಧ ಸ್ಥಾಪಿಸಲು ಪೂರಕವಾಗಬಲ್ಲವೇ ಎಂಬುದನ್ನು ಕಾದು ನೋಡಬೇಕು. (ಇನ್ಫೋ ವಾರ್ತೆ)