ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೆಂಪೇಗೌಡರ ಸ್ಮರಣೆ
ಕರ್ನಾಟಕ
ರಕ್ಷಣಾ
ವೇದಿಕೆಯಿಂದ
ಕೆಂಪೇಗೌಡರ
ಸ್ಮರಣೆ
ದೇವನಹಳ್ಳಿ
ವಿಮಾನ
ನಿಲ್ದಾಣಕ್ಕೆ
ಕೆಂಪೇಗೌಡರ
ಹೆಸರಿಡಲು
ನಾರಾಯಣಗೌಡ
ಒತ್ತಾಯ
ಬೆಂಗಳೂರು : ಒಂದು ಕಾಲದಲ್ಲಿ ಕನ್ನಡದ ಏಕೀಕರಣಕ್ಕೆ ಹೋರಾಡಿದ ನಾವುಗಳು ಈಗ ಕನ್ನಡೀಕರಣಕ್ಕೆ ಹೋರಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪಾಟೀಲ ಹೇಳಿದರು.
ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸೋಮವಾರ(ಜುಲೈ 11) ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಬೆಂಗಳೂರಿನ ಸಂಸ್ಥಾಪಕ ಶ್ರೀ ಕೆಂಪೇಗೌಡರ 437ನೇ ಜಯಂತೋತ್ಸವ ಮತ್ತು ನಾಡ ಭೂಪಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ರಾಜ್ಯದಲ್ಲಿ ಮಾತ್ರ ಮಾತೃಭಾಷಾ ಕಲಿಕೆಗಾಗಿ ಚಳವಳಿ ಮಾಡಬೇಕಾಗಿರುವುದಕ್ಕೆ ವಿಷಾದಿಸಿದ ಅವರು, ಹೈಕೋರ್ಟಿನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿದರೆ ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿಜಾರಿಯಾಗುವುದು. ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ ನೆರೆ ರಾಜ್ಯಗಳಲ್ಲಿ ಈಡೇರಿದ್ದು, ರಾಜ್ಯದಲ್ಲಿ ಸಂವಿಧಾನದ ಹಕ್ಕನ್ನು ಬಳಸಿ ಸ್ಥಳೀಯ ವಿರೋಧಿ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಮಾತನಾಡಿ, ಯಾವುದೇ ಒಂದು ನಾಡು ಪ್ರಗತಿ ಸಾಧಿಸಿದೆ ಎಂದರೆ ಆ ನಾಡನ್ನು ಆಳಿದ ಪ್ರಭುಗಳ ಆಡಳಿತ ಕ್ರಮ, ತ್ಯಾಗ ಮನೋಭಾವ, ಧರ್ಮ ಸಹಿಷ್ಣುತೆ ಮುಂತಾದವುಗಳು ಕಾರಣವಾಗಿರುತ್ತವೆ. ಕೆಂಪೇಗೌಡರು ಇದೇ ದಾರಿಯಲ್ಲಿ ನಡೆದವರು ಎಂದರು.
ಅಶ್ವಾರೂಢ ಕೆಂಪೇಗೌಡ ಪ್ರತಿಮೆಯನ್ನು ನಗರ ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳ ನಡುವೆ ಸ್ಥಾಪಿಬೇಕು. ಮುಂದೆ ತಲೆಯೆತ್ತಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಬೇಕು. ಹಳೆಯ ಕೇಂದ್ರ ಕಾರಾಗೃಹ ನಿವೇಶನದಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ಸ್ಥಾಪನೆ ಆಗಬೇಕು. ಅಲ್ಲದೇ ಕೆಂಪಾಂಬುಧಿ ಕೆರೆ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಕ್ಕೆ ಕೆಂಪಮ್ಮ ಕ್ರೀಡಾಂಗಣ ಎಂದು ನಾಮಕರಣ ಮಾಡಬೇಕು. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಹಕ್ಕೊತ್ತಾಯ ಮಾಡುತ್ತದೆ ಎಂದು ನಾರಾಯಣಗೌಡ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಸುತ್ತಲಿನ ಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕೆಂದು ಹೇಳಿದರು.
ಮಾಜಿ ಸಚಿವ ಎಚ್.ಎನ್.ನಂಜೇಗೌಡ ಮಾತನಾಡಿ, ಕೆಂಪೇಗೌಡರ ಬೆಂಗಳೂರಿನಲ್ಲಿ ಒಬ್ಬ ಒಕ್ಕಲಿಗ ಶಾಸಕ ಅಥವಾ ಲೋಕಸಭಾ ಸದಸ್ಯರಿಲ್ಲ ಎಂದು ವಿಷಾದಿಸಿದರು.
ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಸಂಸದೆ ತೇಜಸ್ವಿನಿ ರಮೇಶ್ ಮಾತನಾಡಿ, ಸಂಸತ್ತಿನಲ್ಲಿ ತಮ್ಮ ರಾಜ್ಯದ ಪ್ರಶ್ನೆ ಬಂದಾಗ 40 ಮತ್ತು 38 ಜನ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಲೋಕಸಭಾ ಸದಸ್ಯರು ಒಂದೇ ಬಾರಿಗೆ ಪ್ರತಿಭಟಿಸುತ್ತಾರೆ. ನಮ್ಮ ರಾಜ್ಯದ ಪ್ರಶ್ನೆ ಬಂದಾಗ ಯಾರೂ ಸಹಕರಿಸದಿರುವುದಿಲ್ಲ ಎಂದರು.
ಕನ್ನಡ ಬಾವುಟ ಹಾರಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಹೂಡಿರುವ ಹಲ್ಲೆ ಮತ್ತು ಕೊಲೆಯತ್ನದ ದಾವೆಯನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಕನ್ನಡ ಬಾವುಟವನ್ನು ರಾಜ್ಯದಲ್ಲಿ ಹಾರಿಸದೇ ಬೇರೆ ರಾಜ್ಯಗಳಲ್ಲಿ ಹಾರಿಸಲಾಗುವುದೇ ಎಂದು ಪ್ರಶ್ನಿಸಿದರು.
ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಮಾಜಿ ಮಹಾಪೌರರಾದ ಜಿ. ನಾರಾಯಣ ಅವರು ಅಧ್ಯಕ್ಷತೆ ವಹಿಸಿದ್ದರು. ರಕ್ಷಣಾ ವೇದಿಕೆಯ ರಾಮಲಿಂಗ ಶೆಟ್ಟಿ ಸ್ವಾಗತಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಎಲ್.ರಮೇಶ್ ನಿರೂಪಿಸಿದರು. ಸಣ್ಣೀರಪ್ಪ ವಂದನಾರ್ಪಣೆ ಮಾಡಿದರು.
ಪ್ರಶಸ್ತಿ : ಸಮಾರಂಭದಲ್ಲಿ ಜಂಟಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ), ಬೆಂ. ಮ. ಪಾ. ಸದಸ್ಯ (ಆಡುಗೋಡಿ) ಬಿ.ಮೋಹನ್, ಯಶಸ್ವೀ ಎವರೆಸ್ಟ್ ಪರ್ವತಾರೋಹಿ ಗಣೇಶ್ ಅನುಪಸ್ಥಿತಿಯಲ್ಲಿ ಪೊಲೀಸ್ ಇಲಾಖೆಯ ಉಪಮಹಾ ನಿರೀಕ್ಷಕ ಜಯರಾಮಯ್ಯ, ಜಾನಪದ ಸಂಶೋಧಕ ಪ್ರೊ.ಡಿ. ಲಿಂಗಯ್ಯ, ಹಿರಿಯ ಚಲನಚಿತ್ರ ನಟಿ ಜಯಂತಿ ಅವರಿಗೆ ನಾಡ ಭೂಪಾಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖಪುಟ / ವಾರ್ತೆಗಳು