ರಾಜಧಾನಿಯಲ್ಲಿ ಸೂರ್ಯ ಜಾರಿಹೋದ, ವರುಣ ಇಳಿದುಬಂದ
ರಾಜಧಾನಿಯಲ್ಲಿ ಸೂರ್ಯ ಜಾರಿಹೋದ, ವರುಣ ಇಳಿದುಬಂದ ಗೋಳಿಬಜೆ ತಿನ್ನೋಣ ಬನ್ನಿರೋ, ಚುರುಮುರಿ ಮೆಲ್ಲೋಣ ಎನ್ನಿರೋ...
ಬೆಂಗಳೂರು : ಮಂಗಳವಾರ ವಿಶ್ವ ತಂಬಾಕು ವಿರೋಧಿ ದಿನ. ತಂಬಾಕಿನ ಬೆಂಕಿ ಆರಿಸಿ ಎಂಬ ಧ್ವನಿ ಜಗತ್ತಿನಲ್ಲಿ ಗುಣಗುಣಿಸುತ್ತಿದ್ದರೆ, ಧೂಮಪ್ರೇಮಿಗಳು ಕಿವಿಗೆ ಹತ್ತಿ ಇಟ್ಟಿದ್ದಾರೆ, ತುಟಿಗೆ ಬತ್ತಿ ಇಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಲೌಡ್ಸ್ಪೀಕರ್ ಇಟ್ಟುಕೊಂಡು ಕಿರುಚಿದರೂ ಕೇಳಲಾರದಷ್ಟು ಅಬ್ಬರದಿಂದ ಮಳೆ ಹೊಡೀತಾ ಇದೆ ಬೆಂಗಳೂರಲ್ಲಿ. ಏನೂ ಇಲ್ಲದೆನೆ ಸಾಯಂಕಾಲ 6 ಗಂಟೆ ಆಗುತ್ತಿದ್ದಂತೆ ಟ್ರಾಫಿಕ್ ಜಾಮು. ಇನ್ನು ಕವಿದ ಕಪ್ಪು ಮೋಡಕ್ಕೆ ಸಾಯಂಕಾಲ ಐದಕ್ಕೇ ಏಳಂತಾಗಿ ಈ ಪಾಟಿ ಮಳೆ ಸುರೀತಾ ಇದ್ರೆ ಬೆಂಗಳೂರಿನ ರಸ್ತೆಗೆ ರಸ್ತೆನೇ ಇರೋದಿಲ್ಲ, ಇನ್ನು ಟ್ರಾಫಿಕ್ ಎಲ್ಲಿಂದ ಮೂವ್ ಆಗಬೇಕು.
ಇಂಥಾ ಟೇಮಲ್ಲಿ ನಿಯತ್ತಾಗಿ ಕೆಲಸ ಮಾಡೋದು ಮೂರೇ ಮೂರು. ಒಂದು ಧೋ ಧೋ ಸುರಿಯುವ ಮಳೆ, ಇನ್ನೊಂದು ಬುಸುಬುಸು ಉಗುಳುವ ಹೊಗೆ, ಮತ್ತು ಕಾಕಾನ ಅಂಗಡಿ ಬಾಣಲೆಯಲ್ಲಿನ ಬಿಸಿಬಿಸಿ ಎಣ್ಣೆ.
ಹಳ್ಳೀಲಾದ್ರೆ ಈ ಮಜಾನೇ ಬೇರೆ. ಮನೆಮಂದಿಯೆಲ್ಲ ಸೋರುವ ಮನೆಯಲ್ಲಿಯೇ, ನೀರು ಬೀಳದ ಕಡೆ ಕುಳಿತು ಹರಟೆ ಹೊಡೆಯುವುದು. ಮೆಣಸಿನ ಕಾಯಿ ಬಜ್ಜಿಯೋ, ಗೋಳಿಬಜೆಯೋ ಮಾಡಿ ಚಾದ ಜೋಡಿ ತಿನ್ನೋದು. ಮಕ್ಕಳಂತೂ ಮಳೆಯ ಕಥೆಗಳನ್ನು ಅಜ್ಜನೋ, ಅಪ್ಪನೋ ಹೇಳುತ್ತಿದ್ದರೆ, ಕಣ್ಣರಳಿಸಿಕೊಂಡು ಕೇಳೊದು.
ಆದರೆ ಪಾಪ ನಮ್ಮ ರಾಜಧಾನಿ ನಗರದ ಬಿಟಿಎಂ ಲೇಔಟ್, ವಿವೇಕನಗರ, ಮಡಿವಾಳ, ಶಿವಾಜಿನಗರ ಮತ್ತಿತರ ತಗ್ಗು ಪ್ರದೇಶಗಳಲ್ಲಿರುವ ಮಂದಿಗೆ ಮನೆಗೇ ನುಗ್ಗಿದ ಮಳೆ ನೀರನ್ನು ಎತ್ತಿ ಹೊರಹಾಕೋದಕ್ಕೇ ಪುರುಸೊತ್ತಿಲ್ಲ, ಇನ್ನು ಬಜ್ಜಿ, ಗೋಳಿಬಜೆ, ಬೋಂಡ..... ಬೇಡಬಿಡಿ ಆ ಮಾತ್ಯಾಕೀಗ!
ಬೆಂಗಳೂರಲ್ಲಿದ್ದೊಡೆ ಟ್ರಾಫಿಕ್ಕಿಗೆ ಅಂಜಿದೊಡೆಂತಯ್ಯಾ ಅಂತ ಪ್ಯಾಂಟನ್ನು ಮೊಳಕಾಲತನಕ ಏರಿಸಿ, ತಲೆಗೊಂದು ಟೋಪಿಥರಾ ಕಾಣ್ಸೋ ಪ್ಲಾಸ್ಟಿಕ್ ಚೀಲ ಸುತ್ಕೊಂಡು, ಬಸ್ಸಿಗೂ ಕಾಯದೇ, ಆಟೋಗೂ ಕಾಯದೆ ಹಿಂದೆ ಕೈಕಟ್ಕೊಂಡು ದುಡುದುಡು ಓಡುವ ಜನರದ್ದೇ ಒಂದು ಗುಂಪಿದೆ.
ದ್ವಿಚಕ್ರವಾಹನ ಸವಾರಿಗರು ಲೈಫ್ ಇನ್ಶೂರನ್ಸ್ ಮಾಡಿಸಿದ್ದರೆ ಒಳಿತು. ಯಾವ ಮರ, ಯಾರ ಮನೆ ಗೋಡೆ ಯಾವಾಗ ಮೇಲೆ ಬೀಳುತ್ತೋ ಎನ್ನುವ ಆತಂಕದಲ್ಲಿಯೇ ಮನೆ ಸೇರೋ ಹೊತ್ತಿಗೆ ಕ್ರೆೃಂ ಸೀರಿಯಲ್ಗಳು ಶುರುವಾಗಿರುತ್ತವೆ.
ಹೊಸದಾಗಿ ಮದುವೆಯಾದ ಜೋಡಿಗೆ ಇಂಥಾ ಸುಸಂದರ್ಭ ಸಿಗಲಾರದು. ಮನೆಯಲ್ಲಿ ಕರೆಂಟ್ ಇಲ್ಲ, ಟೀವಿ ಮುಂದೆ ಕೂರಬೇಕಾದ ಪೀಡೆ ತಪ್ಪಿತು ಎಂದುಕೊಳ್ಳುತ್ತಲೇ, ಮಾಸ್ಕಿಟೋ ರಿಪೆಲ್ಲಂಟ್ ಹಾಕಿ ಮಲಗುವ ಮನೆಯ ಚಿಲಕವನ್ನು ಹಾಕಿದ್ರೆ ಮುಗೀತು!(ಇನ್ಫೋ ವಾರ್ತೆ)