ಇಂಗ್ಲೀಷ್ ಕೊಲೆಗಾರ -ಕಂಬಾರ
ಇಂಗ್ಲೀಷ್
ಕೊಲೆಗಾರ
-ಕಂಬಾರ
ಬ್ರಿಟೀಷರ
ಸಂಪ್ರದಾಯ
ಹಾಗೂ
ಭಾಷೆಯನ್ನು
ಪ್ರಶ್ನಾತೀತವಾಗಿ
ಒಪ್ಪಿಕೊಂಡಿರುವುದು
ಈ
ನೆಲದ
ದುರಂತ...
ಇಂಗ್ಲಿಷ್ ಎನ್ನುವುದು ನಮ್ಮ ಯುವಜನತೆಯ ಅಂತಃಸತ್ವವನ್ನು ಕಸಿಯುವ ಭಾಷೆಯಾ ?
ನಾಡಿನ ಹಿರಿಯ ಕವಿ ಚಂದ್ರಶೇಖರ ಕಂಬಾರ ಹೌದೆನ್ನುತ್ತಾರೆ. ಇಂಗ್ಲೀಷು ಯುವಜನತೆ ಹಾಗೂ ಮಕ್ಕಳ ಸೃಜನಶೀಲತೆಯ ಕತ್ತು ಹಿಸುಕುತ್ತಿದೆ, ಕೊಲ್ಲುತ್ತಿದೆ ಎಂದು ಕಂಬಾರ ನೇರಾನೇರ ಆಪಾದಿಸುತ್ತಾರೆ. ಮೊನ್ನೆ, ಕುಪ್ಪಳ್ಳಿಯಲ್ಲಿ ಜರುಗಿದ ಕುವೆಂಪು ಅವರ ಬರಹಗಳ ಕುರಿತ ಕಮ್ಮಟದಲ್ಲಿ ಕಂಬಾರರು ಪ್ರತಿಪಾದಿಸಿದ್ದು ಈ ನಿಲುವನ್ನೇ. ಕುವೆಂಪು ಅವರ ಜನ್ಮಸ್ಥಳದಲ್ಲಿ ನಡೆದ ಕಮ್ಮಟವನ್ನು ಉದ್ಘಾಟಿಸಿ ಕಂಬಾರರು ಮಾತನಾಡುತ್ತಿದ್ದರು.
ಮಕ್ಕಳು ಉದ್ಧಾರವಾಗಲಿ, ಬುದ್ಧಿವಂತರಾಗಲಿ ಎನ್ನುವ ಉದ್ದೇಶದಿಂದ ಇಂಗ್ಲೀಷು ಕಲಿಸುತ್ತೇವೆ. ಆದರೆ ಈ ಭಾಷೆ ನಮ್ಮ ಮಕ್ಕಳಲ್ಲಿ ಕೀಳರಿಮೆ ತರುತ್ತದೆ. ಹಿಂಜರಿಕೆಯ ಮನೋಭಾವವನ್ನು ಬೆಳೆಸಿ, ನಾಚಿಕೆ ಹೆಚ್ಚಾಗುವಂತೆ ಮಾಡುತ್ತದೆ ಎಂದು ಕಂಬಾರರು ಅಭಿಪ್ರಾಯಪಟ್ಟರು.
ಇಂಗ್ಲಿಷನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದೇವೆ. ಆದರೆ, ಪ್ರಶ್ನಿಸುವ ಮನೋಭಾವವನ್ನೇ ಕಳಕೊಂಡಿದ್ದೇವೆ. ಬ್ರಿಟೀಷರ ಸಂಪ್ರದಾಯ ಹಾಗೂ ಭಾಷೆಯನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡಿರುವುದು, ನಮ್ಮ ಸಂಸ್ಕೃತಿಯನ್ನು ಕಡೆಗಣಿಸಿರುವುದು ವಿಷಾದನೀಯ ಎಂದರು.
ನಮ್ಮ ದೇಶದ ಸಂಸ್ಕೃತಿ ಉದಾತ್ತವಾದುದು, ಸಮೃದ್ಧವಾದುದು. ಮೂಲ ಮಹಾಭಾರತದಂಥ ಕಾವ್ಯದಲ್ಲಿ 4 ಸಾವಿರ ಶ್ಲೋಕಗಳಿವೆ. ಆವೃತ್ತಿ , ಪರಿಷ್ಕರಣೆ ಸೇರಿದಂತೆ ಇಂದು ಮಹಾಭಾರತದಲ್ಲಿ ಒಂದೂವರೆ ಲಕ್ಷ ಶ್ಲೋಕಗಳು ಸೇರ್ಪಡೆಯಾಗಿವೆ. ಇದರರ್ಥ, ವಾಸ್ತವಕ್ಕೆ ತಕ್ಕಂತೆ ಮಹಾಭಾರತ ಬದಲಾಗಿದೆ ಎನ್ನುವುದು. ಭಾರತ ಗಾತ್ರದಲ್ಲಿ ಬದಲಾಗಿದ್ದರೂ, ಅದರ ಕಥೆಯನ್ನು ಕುರುಬನೊಬ್ಬ ಕೂಡ ಅರ್ಥ ಮಾಡಿಕೊಳ್ಳಬಲ್ಲ. ಇದು ಸಾಧ್ಯವಾಗುವುದು ಭಾರತದಲ್ಲಿ ಮಾತ್ರ, ವಿಶ್ವದಲ್ಲಿ ಮತ್ತೆಲ್ಲೂ ಇಂಥ ಉದಾಹರಣೆಗಳು ಸಿಗಲಿಕ್ಕಿಲ್ಲ ಎಂದು ಕಂಬಾರ ಹೇಳಿದರು.
ಬಹಳಷ್ಟು ಸಾಫ್ಟ್ವೇರ್ ಇಂಜಿನಿಯರ್ಗಳು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಐಟಿ ಕಚೇರಿಗಳಲ್ಲಿ ಕನ್ನಡಿಗರಿಗೆ ನಿರ್ದಿಷ್ಟ ಸಂಖ್ಯೆಯ ಉದ್ಯೋಗಳನ್ನು ನೀಡುವ ಕುರಿತು ಸರ್ಕಾರ ನೀತಿ ಸಂಹಿತೆ ರೂಪಿಸಬೇಕು. ನಮ್ಮ ರಾಜಕಾರಣಿಗಳು ಈ ವಿಷಯದಲ್ಲಾದರೂ ಚುರುಕಾಗಲಿ ಎಂದು ಚಂದ್ರಶೇಖರ ಕಂಬಾರ ನುಡಿದರು.
ಈಗ ನೀವು ಹೇಳಿ, ಇಂಗ್ಲಿಷ್ ಯುವ ಜನತೆಯ ಕತ್ತು ಹಿಸುಕುತ್ತಿದೆಯಾ ?
ಮುಖಪುಟ / ವಾರ್ತೆಗಳು