ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದು ಪ್ರಾಮಾಣಿಕನ ಹತ್ಯೆಯಷ್ಟೇ ಅಲ್ಲ, ಪ್ರಾಮಾಣಿಕತೆಯ ಹತ್ಯೆ !

By Staff
|
Google Oneindia Kannada News

ಅದು ಪ್ರಾಮಾಣಿಕನ ಹತ್ಯೆಯಷ್ಟೇ ಅಲ್ಲ, ಪ್ರಾಮಾಣಿಕತೆಯ ಹತ್ಯೆ !
ಸತ್ಯೇಂದ್ರ ದುಬೆಯಂಥ ಇನ್ನಷ್ಟು ಪ್ರತಿಭೆಗಳ ಅಗತ್ಯ ದೇಶಕ್ಕೆ ಇತ್ತು. ಆದರೆ, ಸರ್ಕಾರದ ಉದಾಸೀನದ ಪರಮಾವಧಿ ಕೊಂದಿರುವುದು ಒಬ್ಬ ಸತ್ಯೇಂದ್ರ ದುಬೆಯನ್ನಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು !

  • ಶಾಮ್‌ಲಾಲ್‌
ಶಹಾಪುರ್‌ : ಸರ್ಕಾರದ ಒಂದೇ ಒಂದು ದಿವ್ಯ ಉದಾಸೀನ ಅದೆಷ್ಟೋ ಪ್ರಾಮಾಣಿಕರ ಸೇವೆಯನ್ನು ಕಳೆದುಕೊಳ್ಳುತ್ತದೆ ಎಂಬುದಕ್ಕೆ ಸತ್ಯೇಂದ್ರ ದುಬೆ ಹತ್ಯೆಗಿಂತ ಮತ್ತೊಂದು ದೊಡ್ಡ ಉದಾಹರಣೆ ಸಿಗುವುದಿಲ್ಲ. ಅಣ್ಣನ ಸಾವಿನಿಂದ ತಮ್ಮ ಕಲಿತಿರುವ ಪಾಠವೆಂದರೆ- ಏನೇ ಆಗಲಿ, ಸರ್ಕಾರದ ಕೆಲಸ ಮಾಡಕೂಡದು !

ಬಿಹಾರದ ರಸ್ತೆ ಮಾಫಿಯಾ ಬಗೆಗೆ ಪ್ರಧಾನಿ ಕಚೇರಿಗೆ ವಿವರವಾದ ಮಾಹಿತಿ ಕೊಟ್ಟು, ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಿ ಎಂದು ಕಳಕಳಿ ತೋಡಿಕೊಂಡ ಐಐಟಿ ಪದವೀಧರ ಸತ್ಯೇಂದ್ರ ದುಬೆ ಹೆಸರನ್ನು ರಟ್ಟು ಮಾಡಿದ್ದೇ, ನವೆಂಬರ್‌ನಲ್ಲಿ ಆತ ಕೊಲೆಯಾಗಿ ಹೋದರು. ಕೈತುಂಬಾ ಡಾಲರ್‌ ಲೆಕ್ಕದಲ್ಲಿ ಸಂಬಳ ತಂದುಕೊಡುವ ಕೆಲಸದ ಹಿಂದೆ ಓಡದೆ ‘ಭಾರತ್‌ ಮಾತಾ ಕೀ ಜೈ’ ಎಂದು ಸರ್ಕಾರೀ ಕೆಲಸಕ್ಕೆ ಸೇರಿ, ಸೇವೆ ಮಾಡುವ ಹಾದಿ ತುಳಿದ ದುಬೆಯನ್ನು ಸರ್ಕಾರ ಉಳಿಸಿಕೊಳ್ಳಲಿಲ್ಲ. ಆ ಮೂಲಕ ಸಾವಿರಾರು ಪ್ರಾಮಾಣಿಕರಿಗೆ ಸರ್ಕಾರಿ ಕೆಲಸ ಸುರಕ್ಷಿತವಲ್ಲ ಎಂಬ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದಂತಾಗಿದೆ. ಅಣ್ಣನಷ್ಟೇ ಬುದ್ಧಿವಂತನಾದ ದುಬೆ ತಮ್ಮ ಸರ್ಕಾರದ ಸೇವೆ ಮಾಡಲು ಸುತಾರಾಂ ಒಲ್ಲೆ ಎಂದು ಸಂಕಲ್ಪ ಮಾಡಿದ್ದಾರೆ.

ಸತ್ಯೇಂದ್ರ ದುಬೆ ತಮ್ಮ ಧನಂಜಯ್‌ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಇಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಬಿ.ಟೆಕ್‌ ಓದುತ್ತಿದ್ದಾರೆ. ಅಣ್ಣನ ಸಾವಿನಿಂದ ಇವರು ಒಂದು ಸೆಮಿಸ್ಟರ್‌ ಪರೀಕ್ಷೆ ಬರೆಯಲು ಆಗಿಲ್ಲ. ಆದರೀಗ ಅಣ್ಣನ ನೆನಪಲ್ಲೇ ಚೆನ್ನಾಗಿ ಓದುವುದು ಅವರ ಗುರಿ. ಅರುಣ್‌ ಮತ್ತು ವರುಣ್‌ ಎಂಬ 12 ವರ್ಷದ ಸೋದರ ಸಂಬಂಧಿ ಅವಳಿಗಳು ದುಬೆ ಜೊತೆ ಇದ್ದವು. ಈ ಮಕ್ಕಳಿಗೂ ಈಗ ಪರೀಕ್ಷೆ ಬರೆಯುವ ಮೂಡಿಲ್ಲ. ಅಣ್ಣನಿಗೇ ಹಾಗಾದ ಮೇಲೆ ಓದಿ ಏನಾಗಬೇಕು ಎಂಬ ಹತಾಶೆಯ ಮಾತುಗಳು ಪುಟ್ಟ ಬಾಯಿಂದ ಕೇಳಿಬರುತ್ತಿವೆ. ಸತ್ಯೇಂದ್ರನ ತಂದೆ ಬಾಗೇಶ್ವರಿ ದುಬೆ ಮನೆ ಹತ್ತಿರದ ಸಕ್ಕರೆ ಕಾರ್ಖಾನೆಯಾಂದಕ್ಕೆ ಕಾರಕೂನನಾಗಿ ಕೆಲಸಕ್ಕೆ ಹೋಗುವುದನ್ನು ಮತ್ತೆ ಮುಂದುವರೆಸಿದ್ದಾರೆ. ಇಬ್ಬರು ತಂಗಿಯರು ಟೀಚರ್ಸ್‌ ಟ್ರೆೃನಿಂಗ್‌ ಪರೀಕ್ಷೆಗೆ ಓದಲು ಮನಸ್ಸಿಲ್ಲದ ಮನಸ್ಸಲ್ಲೇ ಕೂತಿದ್ದಾರೆ.

ಅಣ್ಣ ಪ್ರಾಮಾಣಿಕತೆಯ ಪಾಠ ಹೇಳಿಕೊಟ್ಟ. ಅದನ್ನು ನಾನು ಒಪ್ಪುತ್ತೇನೆ. ಬಡವರಾದವರು ಬೇರೆ ಬಡವರನ್ನು ಮೇಲೆತ್ತಲು ಕೆಲಸ ಮಾಡಬೇಕು ಎಂಬ ಕಿವಿಮಾತು ಹೇಳಿದ. ಅದನ್ನೂ ನಾನು ಇಷ್ಟಪಡುತ್ತೇನೆ. ಆದರೆ ಸರ್ಕಾರದ ಜೊತೆಯಲ್ಲಿ ದೇಶದ ಉದ್ಧಾರ ಮಾಡಬೇಕು ಎಂದು ಆತ ಇಟ್ಟ ಹೆಜ್ಜೆಯನ್ನು ನಾನು ಸತ್ತರೂ ಇಡುವುದಿಲ್ಲ. ಅಷ್ಟೇ ಅಲ್ಲ, ದುಬೆ ಪರಿಚಯಸ್ಥರು, ಆತನನ್ನು ‘ರೋಲ್‌ ಮಾಡೆಲ್‌’ ಅಂತ ತಿಳಿದಿದ್ದ ಅನೇಕರು ಸರ್ಕಾರವನ್ನು ಉದ್ಧರಿಸುವ ಕೆಲಸಕ್ಕೆ ಸೇರುವುದಿಲ್ಲ ಅಂತ ಪಣ ತೊಟ್ಟಿದ್ದಾರೆ. ಅಣ್ಣ ಬಡತನದಲ್ಲೇ ಏನೆಲ್ಲಾ ಸಾಧಿಸಿದ. ಇನ್ನೇನು ನಮ್ಮ ಕಷ್ಟವೆಲ್ಲ ಕರಗಿತು ಅನ್ನುವಷ್ಟರಲ್ಲಿ ಅವನ ಪ್ರಾಣವನ್ನೇ ತೆಗೆದುಬಿಟ್ಟರು. ಈಗ ನಮ್ಮ ಪರಿಸ್ಥಿತಿಯಲ್ಲಿ ಬದಲಾವಣೆಯೇ ಇಲ್ಲ. ಅಪ್ಪ ಕಷ್ಟ ಪಡಬೇಕಾದ್ದು ತಪ್ಪಲಿಲ್ಲ. ಅಮ್ಮ ದಿನಕ್ಕೆ ಆಡುವ ಮಾತುಗಳನ್ನು ಎಣಿಸಬಹುದು. ಯಾವ ತಪ್ಪಿಗೆ ಈ ಶಿಕ್ಷೆ... ಎನ್ನುವಷ್ಟರಲ್ಲಿ ಧನಂಜಯ್‌ ಕಣ್ಣು ಮಂಜಾಗುತ್ತದೆ.

ನಾನೂ ದುಬೆಯಂತೆಯೇ ಸಾಧಿಸುತ್ತೇನೆ ಎಂದು ಇತ್ತೀಚೆಗಷ್ಟೇ ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆದಿರುವ ಅದೇ ಊರಿನ ಸಿದ್ಧಾರ್ಥ - ‘ಪ್ರಾಮಾಣಿಕತೆ ಜಾಸ್ತಿಯಾದರೂ ಕಷ್ಟ. ನಿನ್ನ ಸೇವೆಗೆ ಯಾರೂ ಏನೂ ಕೊಡೋದಿಲ್ಲ ಅಂತ ದುಬೆಗೆ ನಾನು ಪದೇಪದೇ ಹೇಳಿದ್ದೆ. ಆದರೆ ಅವನು ನನ್ನ ಮಾತನ್ನು ಕೇಳಲಿಲ್ಲ. ನಡುಬೀದಿಯಲ್ಲಿ ಅವನು ಸತ್ತ. ನನಗೀಗ ಐಎಎಸ್ಸೂ ಬೇಡ, ದರಿದ್ರ ಸರ್ಕಾರದ ಸೇವೆ ಮಾಡುವ ಕೆಟ್ಟ ಸಾಹಸವೂ ಬೇಡ ಅನ್ನಿಸಿಬಿಟ್ಟಿದೆ’ ಅಂದಾಗ ದೊಡ್ಡದೊಂದು ಆತಂಕದ ಸೂಚನೆ ಕಾಣುತ್ತದೆ. ಆದರೆ ಸರ್ಕಾರಕ್ಕೆ ಇದೆಲ್ಲ ಅರ್ಥವಾಗುವುದೇ ಇಲ್ಲ.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X