ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಗೆ ಶಿವಮೊಗ್ಗದಲ್ಲಿ ನಿಷೇಧ
ಸಾರ್ವಜನಿಕ
ಗಣೇಶೋತ್ಸವ
ಮೆರವಣಿಗೆಗೆ
ಶಿವಮೊಗ್ಗದಲ್ಲಿ
ನಿಷೇಧ
ಜಿಲ್ಲಾಡಳಿತದ
ನಿಷೇಧಾಜ್ಞೆ
ವಿರುದ್ಧ
ಹಿಂದೂ
ಸಂಘಟನೆಗಳ
ಆಕ್ರೋಶ
ಜಿಲ್ಲಾಡಳಿತದ ನಿಷೇಧಾಜ್ಞೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಹಿಂತೆಗೆದುಕೊಳ್ಳುವವರೆಗೆ ಗಣೇಶ ಪ್ರತಿಮೆಯನ್ನು ವಿಸರ್ಜಿಸುವುದಿಲ್ಲ ಎಂದು ಪ್ರಸ್ತುತ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವ ಹಿಂದೂ ಸಂಘಟನಾ ಮಹಾ ಮಂಡಳಿ ಹೇಳಿದೆ.
ಮಹಾಮಂಡಳಿಯ ಕಾರ್ಯದರ್ಶಿ ಹಾಗೂ ಬಿಜೆಪಿ ನಾಯಕ ಚೆನ್ನಬಸಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಜಿಲ್ಲಾಡಳಿತವು ಹೀಗೆ ನಿಷೇಧಾಜ್ಞೆ ಹೇರುವುದು ಪ್ರಜಾ ಪ್ರಭುತ್ವಕ್ಕೆ ವಿರೋಧವಾದುದು. ನಿಷೇಧಾಜ್ಞೆಯನ್ನು ಹಿಂತೆಗೆದುಕೊಂಡು ಗಣೇಶ ಪ್ರತಿಮೆಯ ಮೆರವಣಿಗೆ ಹಾಗೂ ಉತ್ಸವಕ್ಕೆ ಅವಕಾಶ ಮಾಡಿಕೊಡದೇ ಇದ್ದಲ್ಲಿ ಮಹಾಮಂಡಳಿಯು ಕೋರ್ಟ್ ಮೊರೆ ಹೋಗುವುದಾಗಿ ಚೆನ್ನಬಸಪ್ಪ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಯನ್ನು ಪೊಲೀಸರಾಗಲೀ, ಜಿಲ್ಲಾಡಳಿತವಾಗಲೀ ಮುಟ್ಟಬಾರದು. ನಿಷೇಧಾಜ್ಞೆಯ ಅವಧಿ ಮುಗಿದ ಕೂಡಲೇ ಮೆರವಣಿಗೆಯಲ್ಲೇ ಮೂರ್ತಿ ವಿಸರ್ಜಿಸಲಾಗುವುದು. ರಾಜಬೀದಿ ಉತ್ಸವಕ್ಕೆ ನಿಷೇಧಾಜ್ಞೆಗಳ ಹಂಗಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಗಣೇಶೋತ್ಸವ ಮೆರವಣಿಗೆ ಸಾಂಗವಾಗಿ ನೆರವೇರಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಉತ್ಸವ ಸಮಿತಿಯಲ್ಲಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಡಾ. ಡಿ. ಎಚ್. ಶಂಕರ ಮೂರ್ತಿ, ಡಿವಿಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪಿ. ವಿ. ಕೃಷ್ಣ ಭಟ್ ಹೇಳಿದರು.
ಜಿಲ್ಲಾಧಿಕಾರಿ ತುಷಾರ್ ಗಿರಿನಾಥ್ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಗಣೇಶೋತ್ಸವ ಮೆರವಣಿಗೆ ನಡೆಯದಂತೆ ಸೋಮವಾರ(ಸೆ. 8) ರಾತ್ರಿ ನಿಷೇಧಾಜ್ಞೆಯನ್ನು ಹೊರಡಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು