ಬಂದ ನಮ ್ಮಕನ್ನಡ ವಿ-ಅಂಚೆಯ ಅಣ್ಣ
ಕನ್ನಡದಲ್ಲಿ ಇ- ಮೇಲ್ ಅಥವಾ ವಿ- ಅಂಚೆ ಕಳಿಸುವುದು ಹೇಗೆ ಅಂತ ಅಸಂಖ್ಯ ಕನ್ನಡಾಭಿಮಾನಿಗಳು ಗೆ ಪತ್ರ ಬರೆದಿದ್ದಾರೆ. ಅಂತಹ ಒಂದು ಸೌಕರ್ಯ ಕಲ್ಪಿಸುವ ಕಾಯಕಕ್ಕೆ ಡೆಕ್ಕನ್ ಹೆರಾಲ್ಡ್ ಬಳಗದ ಮಾಜಿ ಸಂಪಾದಕ ಹರಿಕುಮಾರ್ ಈ ಹಿಂದೆ ಕೈಹಾಕಿದ್ದು ನೆನಪು. ಇ- ಟಪ್ಪಾಲ್ ಎಂಬ ಕನ್ನಡದಲ್ಲೇ ವಿ- ಅಂಚೆ ಕಳಿಸಬಹುದಾದ ವ್ಯವಸ್ಥೆಯನ್ನು ಅವರು ಒದಗಿಸಿದ್ದರು. ಆದರೆ ತಾಂತ್ರಿಕ ತೊಡರುಗಳು ಯೋಜನೆ ಕನ್ನಡ ಮನಸ್ಸುಗಳನ್ನು ತಲುಪದಂತೆ ಮಾಡಿದವು.
ಈಗ ಬೆಂಗಳೂರಲ್ಲೇ ಇರುವ ಇನ್ನೊಬ್ಬ ಕನ್ನಡಿಗ ಯು.ಕೃಷ್ಣಮೂರ್ತಿ ಅದೇ ಸಾಹಸಕ್ಕೆ ಕೈಹಾಕುತ್ತಿದ್ದಾರೆ. ದಿಗ್ಗಜಾತಿ ದಿಗ್ಗಜ ಉದ್ದಿಮೆಗಳಿದ್ದರೂ ಮಾಹಿತಿ ತಂತ್ರಜ್ಞಾನವನ್ನು ಜನ ಸಾಮಾನ್ಯರಿಗೆ ಮುಟ್ಟಿಸಲಾಗುತ್ತಿಲ್ಲವಲ್ಲ ಎಂಬುದು ಈಗ ತಾನೆ ಪದವಿ ಓದು ಮುಗಿಸಿರುವ ಕೃಷ್ಣಮೂರ್ತಿ ಕಳವಳ. ಇಂಟರ್ನೆಟ್ ಮಾಧ್ಯಮವನ್ನು ಇಡಿಯಾಗಿ ಕನ್ನಡದಲ್ಲಿ ಕೊಡುವುದು ಅವರ ಉಮೇದಿ. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನವಾಗಿ ಅವರು ಹುಟ್ಟುಹಾಕಿದ್ದು http://www.nammakannada.com. ಈವರೆಗೆ ತಣ್ಣಗಿದ್ದ ಈ ಡಾಟ್ ಕಾಂ ಕನ್ನಡದಲ್ಲಿ ವಿ- ಅಂಚೆಯ ಸೇವೆ ಒದಗಿಸಿಕೊಡುತ್ತಿರುವುದು ಮೆಚ್ಚತಕ್ಕ ಕೆಲಸ. ಕನ್ನಡ ಗಣಕ ಪರಿಷತ್ ಸಿದ್ಧ ಪಡಿಸಿರುವ ನುಡಿ ಫ್ರೀಲಿಪಿಯನ್ನು ಬಳಸಿ ಇವರು ಕನ್ನಡದಲ್ಲೇ ಇ- ಮೇಲ್ ಸೌಲಭ್ಯ ಒದಗಿಸಿ ಕೊಡುತ್ತಿದ್ದಾರೆ.
ಆಗಸ್ಟ್ 17ನೇ ತಾರೀಕು, ಭಾನುವಾರ ಬೆಂಗಳೂರಿನ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿವಿಜಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ 'ನಮ್ಮ ಕನ್ನಡ ಡಾಟ್ಕಾಂ'ನ ಕನ್ನಡ ವಿ-ಅಂಚೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ವಿ- ಅಂಚೆ ಸೇವೆಯನ್ನು ಉದ್ಘಾಟಿಸಲಿದ್ದು, ಡಾ.ಯು.ಆರ್.ಅನಂತಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜನಾಂದೋಲನ ಸಂಘದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಹಾಗೂ ಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುನಿವೆಂಕಟಪ್ಪ ಮುಖ್ಯ ಅತಿಥಿಗಳು. ನಮ್ಮ ಕನ್ನಡ ಡಾಟ್ ಕಾಂ ಸಂಸ್ಥಾಪಕ ಯು.ಕೃಷ್ಣಮೂರ್ತಿ ತಮ್ಮ ಇಂಟರ್ನೆಟ್ ಕೆಲಸಗಳನ್ನು ಹೇಳಲಿದ್ದಾರೆ. ತಮ್ಮ ಕೆಲಸಕ್ಕೆ ಬೆನ್ನು ತಟ್ಟುತ್ತಿರುವವರ ಪರಿಚಯವನ್ನೂ ಮಾಡಿಕೊಡಲಿದ್ದಾರೆ.
ಕೃಷ್ಣಮೂರ್ತಿಯವರ ಕನ್ನಡ ಕಳಕಳಿಯ ಆನ್ಲೈನ್ ಸೇವೆ ಫಲದಾಯಕವಾಗಲೆಂದು ದಟ್ಸ್ಕನ್ನಡ ಡಾಟ್ ಕಾಂ ಹಾರೈಸುತ್ತದೆ.(ಇನ್ಫೋ ವಾರ್ತೆ)