ಪೇಜಾವರಶ್ರೀ ವಾಹನದಲ್ಲಿ ಆತ ಏನು ಹುಡುಕುತ್ತಿದ್ದ?
ಹಾಸನ : ಪೇಜಾವರ ಮಠಾಧೀಶರು ಸಂಚರಿಸುವ ವಾಹನದಲ್ಲಿ ಹತ್ತಿ ಲಗ್ಗೇಜುಗಳನ್ನು ತಡಕಾಡುತ್ತಿದ್ದ ಯುವಕನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಹಾಸನ ನಗರಕ್ಕೆ ಭೇಟಿ ನೀಡಿದ್ದ ಪೇಜಾವರ ಶ್ರೀಗಳು ಶುಕ್ರವಾರ (ಮೇ 30) ಬೆಳಗ್ಗೆ ರವೀಂದ್ರನಗರದಲ್ಲಿನ ರಾಘವೇಂದ್ರ ಮಠದಿಂದ ಹೊರಡುವ ಸಂದರ್ಭದಲ್ಲಿ ವಾಹನ ಹತ್ತಿ ಲಗೇಜು ತಡವುತ್ತಿದ್ದ ಯುವಕ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದ. ಆಡುವಳ್ಳಿ ಬಡಾವಣೆಯ ಗಿರೀಶ ಎನ್ನುವ ಈ ಯುವಕನ್ನು ಭದ್ರತಾ ಸಿಬ್ಬಂದಿ ಪೊಲೀಸರ ವಶಕ್ಕೆ ಒಪ್ಪಿಸಿದರು.
ಯುವಕನು ವಾಹನದಲ್ಲಿ ಸ್ಫೋಟಕ ವಸ್ತುವೇನಾದರೂ ಇರಿಸಿರಬಹುದೆನ್ನುವ ಗೊಂದಲದಿಂದ ಕೆಲಕಾಲ ಆತಂಕ ಪರಿಸ್ಥಿತಿ ಉಂಟಾಗಿತ್ತು . ವಾಹನ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿ ವಾಹನದಲ್ಲಿ ಸ್ಫೋಟಕ ವಸ್ತುವನ್ನು ಕಾಣದೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪೇಜಾವರ ಶ್ರೀಗಳ ವಾಹನದಿಂದ ವಸ್ತುಗಳನ್ನು ಕದಿಯಲು ಉದ್ದೇಶಿಸಿದ್ದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಬಂಧಿತ ಯುವಕ ಗಿರೀಶ ತಿಳಿಸಿದ್ದಾನೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...