ಕೋಲಾರದ ತುರುಗಳು ಜಿಲ್ಲಾಧಿಕಾರಿಯ ನೀರು ಕೇಳಿದವು
ಕೋಲಾರ : ಶುಕ್ರವಾರ (ಮೇ 30) ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಸು- ಎಮ್ಮೆಗಳು ಒಂದೇ ಸಮ ‘ಅಂಬಾ’ ಎಂದು ಕೂಗುತ್ತಾ ನೀರಿಗಾಗಿ ಮೊರೆಯಿಟ್ಟವು.
ಜಿಲ್ಲೆಯಲ್ಲಿ ಬರದ ತೀವ್ರತೆ ಜೋರಾಗಿದ್ದು ಹಸು- ಎಮ್ಮೆಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ನಿತ್ಯವೂ ಕಸಾಯಿಖಾನೆಯ ಕತ್ತಿಯ ಅಲಗಿಗೆ ಅಷ್ಟೋ ತುರುಗಳ ಕತ್ತು ಕೊಡುವ ಪರಿಸ್ಥಿತಿ. ಇದಕ್ಕೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟಿಸಿ ರೈತರು ತಮ್ಮ ತಮ್ಮ ತುರುಗಳನ್ನು ಕರೆದುಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಗ್ಗಿನಿಂದಲೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದನಗಳ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಹಾಕಿದ್ದ ಅಲ್ಪ ಸ್ವಲ್ಪ ಹುಲ್ಲನ್ನು ತಿಂದು ಪೂರೈಸಿದ ನಂತರ ನೀರಿಲ್ಲದೆ ಜಾನುವಾರುಗಳು ಗೋಗರೆಯುತ್ತಿದ್ದವು.
ಮೇವಿಲ್ಲದೆ ನಿತ್ಯವೂ ಹಸುಗಳು ಸಾಯುತ್ತಿವೆ. ಇನ್ನು ಕೆಲವು ರೈತರು ಮೇವು ಹೊಂಚಲಾರದೆ ತುರುಗಳನ್ನು ಕಸಾಯಿ ಖಾನೆಗೆ ಕಾಸಿಗೆ ಕೊಸರಿಗೆ ಮಾರತೊಡಗಿದ್ದಾರೆ. ಇಂಥಾ ದುಸ್ಥಿತಿ ನಿರ್ಮಾಣವಾಗಿ ತಿಂಗಳೇ ಕಳೆದಿದ್ದರೂ ಜಿಲ್ಲಾಡಳಿತ ಕೈಕಟ್ಟಿ ಕೂತಿದೆ ಎಂದು ರೈತರು ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನದವರೆಗೆ ಪ್ರತಿಭಟನೆ ಮುಂದುವರೆಯಿತು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ಕೊಟ್ಟ ನಂತರ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...