ಜೂ.25ಕ್ಕೆ ಸಿಇಟಿ ರಿಸಲ್ಟು , 1 ಸುತ್ತಿಗಿಳಿದ ಕೌನ್ಸಿಲಿಂಗ್
ಬೆಂಗಳೂರು : ವೃತ್ತಿ ಶಿಕ್ಷಣ ಕೋರ್ಸುಗಳ ಸೀಟು ಹಂಚಿಕೆ ಪ್ರಕ್ರಿಯೆ ಸರಳಗೊಳಿಸಲು ಈ ಬಾರಿ ಒಂದೇ ಸುತ್ತಿನ ಕೌನ್ಸಿಲಿಂಗ್ ನಡೆಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಉನ್ನತ ಶಿಕ್ಷಣ ಸಚಿವ ಡಾ। ಜಿ. ಪರಮೇಶ್ವರ ಸುದ್ದಿಗಾರರಿಗೆ ಶುಕ್ರವಾರ (ಮೇ 31) ಈ ವಿಷಯ ತಿಳಿಸಿದರು. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಈ ಬಾರಿ ಅಂದುಕೊಂಡಿದ್ದಕ್ಕಿಂತ 5 ದಿನ ಮುಂಚೆಯೇ (ಜೂನ್ 25) ಪ್ರಕಟವಾಗಲಿದೆ ಎಂದರು.
ಸುಪ್ರಿಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಏಕರೂಪ ಶುಲ್ಕ ವ್ಯವಸ್ಥೆಗೆ ಬಿಗಿ ಪಟ್ಟು ಹಿಡಿದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳ ಪೈಕಿ ಒಂದು ಸುತ್ತಿನ ಕೌನ್ಸಿಲಿಂಗ್ ನಡೆಸಿ ಎಂಬುದೂ ಒಂದಾಗಿತ್ತು. ಈಗ ಸರ್ಕಾರ ಅದನ್ನು ಈಡೇರಿಸುವ ಮೂಲಕ ಖಾಸಗಿ ಸಂಸ್ಥೆಗಳ ಬೆನ್ನು ನೇವರಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಓಲೈಸಲು ನಾವು ಹೀಗೆ ಮಾಡಿಲ್ಲ. ಒಂದೇ ಸುತ್ತಿನ ಕೌನ್ಸಿಲಿಂಗ್ನಿಂದ ಪ್ರವೇಶ ಪ್ರಕ್ರಿಯೆ ಇನ್ನಷ್ಟು ಸುಲಭ ಹಾಗೂ ಸರಳವಾಗುತ್ತದೆ ಎಂದಷ್ಟೇ ಹೀಗೆ ಮಾಡಿದ್ದೇವೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.
ಶುಲ್ಕ ನಿಗದಿಗಾಗಿ ರಚಿಸಲಾಗಿರುವ ‘ಶುಲ್ಕ ನಿಯಂತ್ರಣ ಸಮಿತಿ’ ಶೀಘ್ರದಲ್ಲೇ ವರದಿ ಸಲ್ಲಿಸಲಿದೆ. ಸಿಇಟಿ ಫಲಿತಾಂಶ ಹೊರ ಬರುವ ಬೆನ್ನಲ್ಲೇ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದರು.
ಸಿಇಟಿಗೆ ಚಕ್ಕರ್ ಜಾಸ್ತಿ : ಈ ಬಾರಿ ಸಿಇಟಿಗೆ ಸಾಕಷ್ಟು ವಿದ್ಯಾರ್ಥಿಗಳು ಚಕ್ಕರ್ ಹೊಡೆದಿದ್ದಾರೆ. ಬೆಂಗಳೂರು ಕೇಂದ್ರಗಳೆಲ್ಲವಕ್ಕೆ 70 ಸಾವಿರ ಚಿಲ್ಲರೆ ವಿದ್ಯಾರ್ಥಿಗಳು ಪರೀಕ್ಷೆಗೆ ಬರಬೇಕಿತ್ತು. ಆದರೆ ಹಾಜರಾತಿ ಸಂಖ್ಯೆ ಕೇವಲ 42 ಸಾವಿರ ಚಿಲ್ಲರೆ ಇತ್ತು. ಒಟ್ಟಾರೆ ಪರೀಕ್ಷೆಗೆ ಅರ್ಜಿ ಗುಜರಾಯಿಸಿದವರ ಪೈಕಿ 60- 65 ಪ್ರತಿಶತ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...