ಬಿಸಿಲ ಬದುಕು ನಮ್ಮ ಕಣ್ಣು ತೆರೆಸಬೇಕು- ಕೃಷ್ಣ
ಬೆಂಗಳೂರು : ರಾಜ್ಯದಲ್ಲಿ ತಲೆದೋರಿರುವ ಬಿಸಿಲ ಬದುಕು ನಮ್ಮೆಲ್ಲರ ಕಣ್ಣು ತೆರೆಸಬೇಕಾಗಿದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅಭಿಪ್ರಾಯಪಟ್ಟರು.
ಮೇ ತಿಂಗಳಲ್ಲಿ ಸಿಕ್ಕಾಪಟ್ಟೆ ಏರಿರುವ ಬಿಸಿಲಿನ ಝಳ ಇತರ ನಾಗರಿಕರಂತೆ ಮುಖ್ಯಮಂತ್ರಿ ಕೃಷ್ಣ ಅವರನ್ನೂ ತಟ್ಟಿದೆ. ಬುಧವಾರ (ಮೇ28) ಜಲಮಂಡಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೃಷ್ಣ ಮಾತನಾಡಿದ್ದು ಬಿಸಿಲಿನ ಕುರಿತಾಗಿಯೇ.
ಈ ವರ್ಷದ ಮೇ ತಿಂಗಳು ಅಂತಿಂಥದಲ್ಲ ; ಈ ಪರಿಯ ಮೇ ತಿಂಗಳನ್ನು 113 ವರ್ಷಗಳ ಹಿಂದೆ ಮಾತ್ರ ಬೆಂಗಳೂರು ಕಂಡಿತ್ತು ಎಂದು ಕೃಷ್ಣ ಉದ್ಘರಿಸಿದರು. ಬೆಂಗಳೂರಿನ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು ನಮ್ಮೆಲ್ಲರನ್ನೂ ಕಂಗೆಡಿಸಿದೆ ಎಂದರು.
ಸಸ್ಯಕಾಶಿ, ಉದ್ಯಾನಗರಿ ಎನ್ನುವ ಬೆಂಗಳೂರಿನ ವಿಶೇಷಣಗಳು ಕ್ಲೀಷೆಯಾಗಬಾರದು. ಬಿಸಿಲಿನ ಝಳ ಕಡಿಮೆಯಾಗಬೇಕಾದರೆ ಸಸ್ಯ ಸಂಪತ್ತು ಹೆಚ್ಚಾಗಬೇಕು ಎಂದು ಕೃಷ್ಣ ಅಭಿಪ್ರಾಯಪಟ್ಟರು.
ಬಿಸಿಲ ಬದುಕಿನಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ. ನೀರನ್ನು ಅತಿ ಎಚ್ಚರದಿಂದ ಬಳಸಬೇಕೆನ್ನುವುದೇ ಆ ಪಾಠ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.
*
ಬಾಲಂಗೋಚಿ: ಬೆಂಗಳೂರು ನಗರದಲ್ಲಿ ಈ ಬಾರಿ ರಸ್ತೆ ಅಗಲೀಕರಣದ ನೆಪದಲ್ಲಿ ಸುಮಾರು 1,200ಕ್ಕೂ ಹೆಚ್ಚು ಮರಗಳು ನೆಲಸಮವಾಗಿರುವುದನ್ನು ಪರಿಸರವಾದಿಗಳು ಖಂಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ