ಎಲ್ಲರೂ ಬೇಡುವುದು ಬೊಗಸೆ ನೀರಿಗಾಗಿ...!
ದಾವಣಗೆರೆ : ಚೆನ್ನಗಿರಿ ಗ್ರಾಮದ ಜನರು ತಮ್ಮ ಹಳ್ಳಿಯ ಕೆರೆಯ ಹೂಳೆತ್ತಲು ಸಿದ್ಧರಾಗಿದ್ದಾರೆ.
ಸರಕಾರ ಅಥವಾ ಗ್ರಾಮ ಪಂಚಾಯತ್ಗೆ ಮೊರೆ ಇಡುವುದರಲ್ಲಿ ಅರ್ಥವಿಲ್ಲ. ತಾವೇ ತಮ್ಮ ಹಳ್ಳಿಯಲ್ಲಿನ ಭದ್ರಾ ಜಲಾಶಯಕ್ಕೆ ಹೊಂದಿಕೊಂಡಂತೆ ಇರುವ ಕೆರೆಯ ಹೂಳೆತ್ತುವುದರ ಮೂಲಕ ನೀರಿನ ಸಂಪನ್ಮೂಲ ಕಂಡುಕೊಳ್ಳುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ.
ಬಿಜಾಪುರ : ಮಹಾರಾಷ್ಟ್ರವು ಉಜಿನಿ ಜಲಾಶಯದಿಂದ ಭೀಮಾ ನದಿಗೆ ಹರಿಯಬಿಡುತ್ತಿರುವ ನೀರು 200 ಕ್ಯೂಸೆಕ್ಸ್ಗಿಂತ ಕಡಿಮೆಯಾಗಿದೆ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಕನಿಷ್ಠ 200 ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ ಬಿಡುವಂತೆ ಸೂಚಿಸಿತ್ತು. ಮಹಾರಾಷ್ಟ್ರವು ಭೀಮಾ ನದಿ ಪಾತ್ರದ ಜನರಿಗೆ ಮೋಸ ಮಾಡುತ್ತಿದೆ ಎಂದು ಜಲ ಆಯೋಗದ ಅಧಿಕಾರಿಗಳು ದೂರಿದ್ದಾರೆ.
ಮಡಿಕೇರಿ : ಕುಡಿಯುವ ನೀರಿಗೆ ವಿಪರೀತ ತೊಂದರೆ ಎದುರಿಸುತ್ತಿರುವ ಮಡಿಕೇರಿಯ ಜನರು ಖಾಲಿ ಕೊಡಪಾನ ರ್ಯಾಲಿಯನ್ನು ಮಂಗಳವಾರ (ಮೇ 27) ನಡೆಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಜಿ. ಬೋಪಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಡಿಕೇರಿ ನಗರದಲ್ಲಿ 23 ವಾರ್ಡ್ಗಳಿದ್ದರೂ ಕೇವಲ 2 ಟ್ಯಾಂಕರ್ಗಳು ಮಾತ್ರ ನೀರು ಸರಬರಾಜು ಮಾಡುತ್ತಿವೆ. ಈ ಎರಡು ಟ್ಯಾಂಕರ್ಗಳಿಂದ ಎಲ್ಲ ವಾರ್ಡ್ಗಳಿಗೂ ನೀರು ಹಂಚುವುದು ದುಃಸ್ಸಾಧ್ಯವಾದ್ದರಿಂದ ಹೆಚ್ಚುವರಿ ಟ್ಯಾಂಕರ್ಗಳನ್ನು ನೀರು ಸರಬರಾಜಿಗೆ ನೇಮಿಸಬೇಕು ಎಂದು ಪ್ರತಿಭಟನಾ ಕಾರರರು ಆಗ್ರಹಿಸಿದರು.
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಬರದೇ ಇರುವುದನ್ನು ಗಮನಿಸಿ ಜಲ ಸಂಪನ್ಮೂಲ ವಿಭಾಗವು ಕೃತಕ ಮಳೆ ತರಿಸುವ ಬಗ್ಗೆ ಚಿಂತನೆ ನಡೆಸಿದೆ. ಕೃತಕ ಮಳೆ ಯೋಜನೆಯನ್ನು ಕಾರ್ಯಗತಗೊಳಿಸಿದಲ್ಲಿ ಜೂನ್ ಮತ್ತು ಅಕ್ಟೋಬರ್ ನಡುವೆ ಶೇ 15ರಿಂದ 25ರಷ್ಟು ಜಾಸ್ತಿ ಮಳೆಯಾಗುವ ಸಂಭವ ಇದೆ.
ಮೈಸೂರು: ಬರಗಾಲ ಪೀಡಿತ ಜಿಲ್ಲೆ ಕೋಲಾರದ ಚಿಂತಾಮಣಿ, ಗುಡಿಬಂಡೆ ಮತ್ತಿತರ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಪೂರೈಸಲು ಪರಗೋಡು-ಚಿತ್ರಾವತೀ ಕುಡಿಯುವ ನೀರಿನ ಯೋಜನೆಯನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹೇಳಿದ್ದಾರೆ. ಇದು ಕುಡಿಯುವ ನೀರಿಗಾಗಿಯೇ ವಿಶೇಷವಾಗಿ ಕೈಗೆತ್ತಿಕೊಳ್ಳಲಾಗುವ ಯೋಜನೆ. ಆಂಧ್ರಪ್ರದೇಶದ ತಕರಾರಿನ ನಡುವೆಯೂ ಪರಗೋಡು-ಚಿತ್ರಾವತಿ ಯೋಜನೆಗೆ ಹೆಚ್ಚಿನ ಗಮನ ಕೊಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಮುಖಪುಟ / ಇವತ್ತು... ಈ ಹೊತ್ತು...