ಜೂನ್ 7ರಿಂದ ಮುಂಗಾರುಮಳೆ,ಆತಂಕ ಬೇಡ- ಕೃಷ್ಣ
ಮೈಸೂರು : ಜೂನ್ 7 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು , ಕುಡಿಯುವ ನೀರಿನ ಬಗೆಗೆ ಜನತೆ ಆತಂಕ ಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜೂನ್ 7ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾಗುವುದಾಗಿ ಕೇರಳದ ಹವಾಮಾನ ಇಲಾಖೆ ತಿಳಿಸಿದೆ. ಆ ಕಾರಣದಿಂದ ರಾಜ್ಯದ ಜನತೆ ನಿರಾತಂಕದಿಂದ ಇರಬಹುದು ಎಂದು ಕೃಷ್ಣ ಹೇಳಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ 4.5 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ಯೋಜನೆ ಹಾಗೂ ಸರ್ಕಾರಿ ಆಸ್ಪತ್ರೆಯ ಮೇಲ್ದರ್ಜೆಗೇರಿದ ಘಟಕವನ್ನು ಉದ್ಘಾಟಿಸಿ ಕೃಷ್ಣ ಮಾತನಾಡುತ್ತಿದ್ದರು (ಮೇ26, ಸೋಮವಾರ).
ಬರ ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಪ್ರತಿಪಕ್ಷಗಳು ಯತ್ನಿಸಬಾರದು. ಆಂಧ್ರ, ತಮಿಳುನಾಡುಗಳಲ್ಲೂ ರಾಜ್ಯದಂತೆಯೇ ಬರ ಪರಿಸ್ಥಿತಿಯಿದ್ದು - ಧರ್ಮ, ಗಡಿ ಅಥವಾ ಭಾಷೆಯ ಆಧಾರದ ಮೇಲೆ ರಾಜಕೀಯ ಮಾಡುವುದು ಸಲ್ಲದು ಎಂದರು.
ಕೃತಕ ಮಳೆ ಬರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲಹೆ ಕಾರ್ಯಸಾಧುವಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಅಭಿಪ್ರಾಯಪಟ್ಟರು.
ಮೂರು ದಿನಕ್ಕೊಮ್ಮೆ ನೀರು : ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳಮಟ್ಟ ಮುಟ್ಟಿರುವುದರಿಂದ, ಬೆಂಗಳೂರು ಸೇರಿದಂತೆ ಕಾವೇರಿ ನೀರು ಪೂರೈಕೆ ವ್ಯಾಪ್ತಿಯ ಪಟ್ಟಣಗಳಿಗೆ ಮೂರು ದಿನಗಳಿಗೊಮ್ಮೆ ನೀರು ಪೂರೈಸಲು ಜಲ ಮಂಡಳಿ ತೀರ್ಮಾನಿಸಿದೆ. ಈ ತೀರ್ಮಾನದ ವಿರುದ್ಧ ಜನತೆಯ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ