ಬೆಂಗಳೂರು ರೈಲು ನಿಲ್ದಾಣದಲ್ಲಿ ಉದ್ಯಮಿ ಕೊಲೆ
ಬೆಂಗಳೂರು: ನಗರದ ರೈಲು ನಿಲ್ದಾಣದಲ್ಲಿ ಬಳ್ಳಾರಿ ಮೂಲದ ಅಬಕಾರಿ ಗುತ್ತಿಗೆದಾರರೊಬ್ಬರನ್ನು ಮೇ14ರ ಬುಧವಾರ ಬೆಳಗ್ಗೆ ದುಷ್ಕರ್ಮಿಗಳು ಗುಂಡಿಕ್ಕೆ ಕೊಂದಿದ್ದಾರೆ.
ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಳ್ಳಾರಿಯಿಂದ ಬೆಂಗಳೂರು ನಗರಕ್ಕೆ ಆಗಮಿಸುತ್ತಿದ್ದ ಅಬಕಾರಿ ಗುತ್ತಿಗೆದಾರ ಪ್ರಶಾಂತ್ ಬಾಬು ರೈಲಿನಿಂದ ಇಳಿದು ಎಂಟನೇ ಫ್ಲಾಟ್ ಫಾರಂಗೆ ಬರುತ್ತಿದ್ದಂತೆಯೇ ಗುರುತು ಸಿಗದ ಇಬ್ಬರು ವ್ಯಕ್ತಿಗಳು ಪ್ರಶಾಂತ್ ಅವರ ಹಣೆಗೆ ಗುಂಡು ಹಾರಿಸಿ, ತಕ್ಷಣವೇ ಪರಾರಿಯಾಗಿದ್ದಾರೆ.
ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಹಿಂದಿನ ಕಾರಣ ಪತ್ತೆಯಾಗಿಲ್ಲ. ಆದಾಗ್ಯೂ, ಅಬಕಾರಿ ಗುತ್ತಿಗೆ ಸಂಬಂಧದ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಮ್ಮಸಂದ್ರ ಬಳಿ ರೈಲು ದರೋಡೆ
ಬೆಂಗಳೂರು- ಹುಬ್ಬಳ್ಳಿ ರೈಲಿನಲ್ಲಿ ಡಕಾಯಿತರು ಪ್ರಯಾಣಿಕರನ್ನು ಲೂಟಿಗೈದಿದ್ದಾರೆ. ಮಂಗಳವಾರ ಮಧ್ಯರಾತ್ರಿಯ ಸಮಯ, ಬೆಂಗಳೂರು- ಹುಬ್ಬಳ್ಳಿ ರೈಲು ತುಮಕೂರಿನ ಅಮ್ಮಸಂದ್ರದ ಬಳಿ ಬರುತ್ತಿದ್ದಾಗ ಡಕಾಯಿತರು ಪ್ರಯಾಣಿಕರ ಚಿನ್ನ ಹಾಗೂ ನಗದು ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಡಕಾಯಿತರ ಗುಂಪಿನಲ್ಲಿ ಎಂಟು ಮಂದಿ ಇದ್ದುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರೈಲುಬೋಗಿಯಾಂದಕ್ಕೆ ನುಗ್ಗಿದ ಡಕಾಯಿತರು ಮೂವರು ಪ್ರಯಾಣಿಕರನ್ನು ಬೆದರಿಸಿ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಚಿನ್ನ ದೋಚಿದ್ದಾರೆ. ಡಕಾಯಿತರ ಗುಂಪಲ್ಲಿದ್ದ ಒಬ್ಬ ವ್ಯಕ್ತಿ ರೈಲು ಪ್ರಯಾಣಿಕರ ಬಳಿ ಸಿಕ್ಕಿಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...