ಪ್ಲೇವಿನ್ ದಮನಕ್ಕೆ ಪಂಚ ಲಾಟರಿಲಕ್ಷ್ಮಿಯರಾಗಮನ
ಬೆಂಗಳೂರು : ಈಶಾನ್ಯ ರಾಜ್ಯಗಳ ಲಾಟರಿ ಪೋಟಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕರ್ನಾಟಕದ ಲಾಟರಿ ಏಜೆನ್ಸಿ ಎಂಎಸ್ಐಎಲ್ ಐದು ಹೊಸ ದಿನಂಪ್ರತಿ ಡ್ರಾ ಲಾಟರಿಗಳನ್ನು ಪ್ರಾರಂಭಿಸಿದೆ.
ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಡೆಟ್ (ಎಂಎಸ್ಐಎಲ್) ನ ನಿರ್ದೇಶಕ ಚಿದಂಬರನಾಥ್ ಬುಧವಾರ ಹೊಸ ಲಾಟರಿಗಳನ್ನು ಪರಿಚಯಿಸಿ, ಸುದ್ದಿಗಾರರ ಜತೆ ಮಾತಾಡಿದರು. ಪ್ರತಿನಿತ್ಯ ಈಶಾನ್ಯ ರಾಜ್ಯಗಳ ವಿವಿಧ ಲಾಟರಿಗಳು 400 ಡ್ರಾ ಮಾಡುತ್ತಿವೆ. ಅಂದಾಜು 4 ಕೋಟಿ ರುಪಾಯಿ ಮೊತ್ತದ ಬಹುಮಾನ ಇಟ್ಟಿವೆ. ಹೀಗಾಗಿ ನಮ್ಮ ಲಾಟರಿಯ ಖಾಸಾ ಗಿರಾಕಿಗಳೂ ಆ ಕಡೆ ವಾಲುತ್ತಿದ್ದಾರೆ. ಇದನ್ನು ತಪ್ಪಿಸಲು ಪ್ರತಿ ದಿನ ಭಾಗ್ಯಲಕ್ಷ್ಮಿ, ಯೋಗ ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ, ಧನ ಲಕ್ಷ್ಮಿ ಮತ್ತು ಕನಕ ಲಕ್ಷ್ಮಿ ಹೆಸರಿನ ಲಾಟರಿಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.
ಈ ಒಂದಂಕಿ ಲಾಟರಿಯ ಪ್ರತಿ ಟಿಕೇಟಿನ ಬೆಲೆ 10 ರುಪಾಯಿ. ಬೆಳಗ್ಗೆ 11 ಗಂಟೆಯಿಂದ ಸಂಜೆ 4.30ರವರೆಗೆ ವಿವಿಧ ವೇಳೆಯಲ್ಲಿ ಈ ಎಲ್ಲಾ ಲಾಟರಿ ಡ್ರಾಗಳು ನಡೆಯಲಿವೆ.
2003- 03ರಲ್ಲಿ ಎಂಎಸ್ಐಎಲ್ ಲಾಟರಿ ವಹಿವಾಟು 46.23 ಕೋಟಿ ರುಪಾಯಿಯಷ್ಟಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 11.69 ಕೋಟಿ ರುಪಾಯಿ ಆದಾಯ ಬಂದಿದೆ. 2001- 02ರಲ್ಲಿ ಸರ್ಕಾರಕ್ಕೆ 12.19 ಕೋಟಿ ರುಪಾಯಿ ಆದಾಯ ಸಂದಿದ್ದು, ಈಗ ಲಾಟರಿ ವಹಿವಾಟು ತೀರಾ ಕುಸಿದಿದೆ. ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ ತುಂಬಲು ಹೊಸ ಲಾಟರಿ ಡ್ರಾಗಳಿಂದ ಸಾಧ್ಯವಾಗಲಿದೆ ಎಂದು ಚಿದಂಬರನಾಥ್ ಸಮರ್ಥನೆ ಕೊಟ್ಟರು.
ಕಳೆದ ವರ್ಷ ಅಕ್ಟೋಬರ್ನಿಂದ ಆನ್ಲೈನ್ ಲಾಟರಿ ಸೆಳಕಿನ ಕಾರಣ ರಾಜ್ಯ ಲಾಟರಿ ವ್ಯಾಪಾರ ಪ್ರತಿಶತ 15ರಷ್ಟು ಕುಸಿದಿದೆ. ಬರುವ ದಿನಗಳಲ್ಲಿ ವ್ಯಾಪಾರಕ್ಕೆ ಇನ್ನಷ್ಟು ಪೆಟ್ಟು ಬೀಳುವ ಆತಂಕ ಇರುವುದರಿಂದ ಒಂದು ಕಾಲದಲ್ಲಿ ತಾನೇ ನಿಷೇಧಿಸಿದ್ದ ಒಂದಂಕಿ ಲಾಟರಿ ದಂಧೆಗೆ ಸರ್ಕಾರ ಖುದ್ದು ಇಳಿಯುತ್ತಿದೆ.
ಅಂದಹಾಗೆ, ಲಾಟರಿ ಕೊಳ್ಳುವವರು ಕಡಿಮೆ ಆದಾಯವಿರುವ ಕೆಳ ಮಧ್ಯಮ ವರ್ಗ ಹಾಗೂ ಬಡ ಜನತೆ ಎಂದು ಖುದ್ದು ಚಿದಂಬರನಾಥ್ ಹೇಳಿದ್ದಾರೆ. ಅಲ್ಲಿಗೆ, ಆನ್ಲೈನ್ ಲಾಟರಿ ಅಡ್ಡ ಮುಂದಿರುವ ಜೀವಗಳು ಒಂದಂಕಿ ಲಾಟರಿಯ ಹಳೆ ಗಂಡನ ಪಾದಕ್ಕೇ ಮತ್ತೆ ಎರಗಲಿದ್ದಾರೆ.
ಪ್ಲೇವಿನ್ನಂಥಾ ಚತುರಮತಿ ದಂಧಾಕೋರ ಕಂಪನಿ ಲಾಟರಿ ಚಪಲ ಚೆನ್ನಿಗರಿಗೆ ಇನ್ನೇನು ಆಮಿಷ ತೋರಿಸೀತೋ ನೋಡಬೇಕು.
(ಪಿಟಿಐ)
ಪೂರಕ ಓದಿಗೆ-
ಕೃಷ್ಣ ರಾಜ್ಯದಲ್ಲಿ ಪ್ಲೇವಿನ್ ಜೊತೆಗೆ ಒಂದಂಕಿ ಲಾಟರಿ
ಮುಖಪುಟ / ಇವತ್ತು... ಈ ಹೊತ್ತು...