ಸಾಫ್ಟ್ವೇರ್ ಕಂಪನಿಯಿಂದ ಕೋಟ್ಯಂತರ ರು.ಗುಳುಂ
ಬೆಂಗಳೂರು : ಸೂತ್ರ ಇನ್ಫೋ ಸಲ್ಯೂಷನ್ಸ್ ಹೆಸರಿನ ಸಾಫ್ಟ್ವೇರ್ ಕಂಪನಿಯಾಂದು 525 ಸೈಬರ್ ಕೆಫೆ ಮಾಲೀಕರನ್ನು ವಂಚಿಸಿ, ಕೋಟ್ಯಂತರ ರುಪಾಯಿ ನುಂಗಿ ಹಾಕಿದೆ. ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲವು ತಿಂಗಳ ಹಿಂದೆ ಸೂತ್ರ ಇನ್ಫೋ ಸಲ್ಯೂಷನ್ಸ್ ಎಂಬ ಸಾಫ್ಟ್ವೇರ್ ಕಂಪನಿ ತಲೆಯೆತ್ತಿತು. ಬೆಂಗಳೂರು, ಮೈಸೂರು, ಮಣಿಪಾಲ, ಕೇರಳ, ಉಡುಪಿ, ಹೈದರಾಬಾದ್ ಹಾಗೂ ಚೆನ್ನೈನಲ್ಲಿನ 525 ಸೈಬರ್ ಕೆಫೆಗಳ ಮಾಲೀಕರನ್ನು ತನ್ನ ಪಾಲುದಾರರನ್ನಾಗಿಸಿಕೊಂಡಿತು. ಇದಕ್ಕಾಗಿ ಪ್ರತಿ ಸೈಬರ್ ಕೆಫೆಯಿಂದ 50 ರಿಂದ 1 ಲಕ್ಷ ರುಪಾಯಿ ಹಣ ಸಂಗ್ರಹಿಸಿತು. ಒಂದು ತಿಂಗಳಿಗೆ 45 ಸಾವಿರ ರುಪಾಯಿ ಕೊಡುವುದಾಗಿ ಕಂಪನಿ ಆಮಿಷವೊಡ್ಡಿದ ಕಾರಣ ಸೈಬರ್ ಕೆಫೆಗಳ ಮಾಲೀಕರು ಕುರಿಗಳಾದರು.
ಒಂದು ತಿಂಗಳು ಕಳೆದ ನಂತರ ಸೈಬರ್ ಕೆಫೆಗಳಿಗೆ ಕಂಪನಿ ಕೊಟ್ಟ ಚೆಕ್ಗಳು ಬೌನ್ಸ್ ಆದವು. ಎರಡೂ ತಿಂಗಳ ಹಣವನ್ನು ಒಟ್ಟಾಗಿ ಕೊಡುವುದಾಗಿ ಕಂಪನಿಯ ಅಧಿಕಾರಿಗಳ ಭರವಸೆ ಕೊಟ್ಟ ಕಾರಣ ಕೆಫೆಗಳ ಮಾಲೀಕರು ಸುಮ್ಮನಾದರು. ಆದರೆ ಮೇ. 6ನೇ ತಾರೀಕು ಕಂಪನಿಯ ಬಾಗಿಲಿಗೆ ಬೀಗ ಜಡಿದು, ಅಧಿಕಾರಿಗಳು ತಲೆ ಮರೆಸಿಕೊಂಡರು. ಬಿಟಿಎಂ ಲೈಔಟಿನ ಸೈಬರ್ ಕೆಫೆ ಮಾಲೀಕ ನೂರ್ ಅಹ್ಮದ್ ಎಂಬಾತ ಉಳಿದ ಸೈಬರ್ ಕೆಫೆಗಳ ಮಾಲೀಕರಿಗೆ ವಿಷಯ ತಿಳಿಸಿ, ಪೊಲೀಸ್ ಠಾಣೆಗೆ ದೂರು ಕೊಟ್ಟರು. ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಎಂಬುವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಷಾ ಹಾಗೂ ನಿರ್ದೇಶಕ ಸೂರಜ್ ತಲೆ ಮರೆಸಿಕೊಂಡಿದ್ದಾರೆ.
ಕೇರಳ ಹಾಗೂ ಹೈದರಾಬಾದ್ನ 400, ಚೆನ್ನೈನ 250, ಬೆಂಗಳೂರಿನ 101, ಮಂಗಳೂರಿನ 15 ಹಾಗೂ ಉಡುಪಿ ಮತ್ತು ಮಣಿಪಾಲದ 6 ಸೈಬರ್ ಕೆಫೆಗಳಿಗೆ ಸೂತ್ರ ಇನ್ಫೋ ಸಲ್ಯೂಷನ್ಸ್ ಇಂಟರ್ನೆಟ್ ಸಂಪರ್ಕ ಒದಗಿಸಿ, ಕೆಫೆಗಳನ್ನು ವ್ಯಾವಹಾರಿಕ ಪಾಲುದಾರರನ್ನಾಗಿಸಿಕೊಂಡಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ