ಮೈಸೂರಿನ ವಿಚಾರವಾದಿ ರಾಮದಾಸ್ಗೆ ಕೊಲೆ ಬೆದರಿಕೆ
ಮೈಸೂರು : ಟಿಪ್ಪು ಸುಲ್ತಾನನ ದೇಶಭಕ್ತಿ ಹಾಗೂ ಜಾತ್ಯತೀತತೆ ಕುರಿತು ಕಳೆದ ಕೆಲವು ದಿನಗಳಿಂದ ಸಂಘ ಪರಿವಾರ ಮತ್ತಿತರ ಸಂಘಟನೆಗಳ ನಡುವೆ ನಡೆಯುತ್ತಿರುವ ಚಕಮಕಿ ಬುಧವಾರ ಆತಂಕಕಾರಿ ಬೆಳವಣಿಗೆ ಕಂಡಿದೆ. ಮೈಸೂರಿನ ಸಾಹಿತಿ ಮತ್ತು ವಿಚಾರ ವಾದಿ ಕೆ.ರಾಮದಾಸ್ ಅವರಿಗೆ ಜೀವ ಬೆದರಿಕೆ ಕರೆಗಳು ಬರತೊಡಗಿವೆ.
ಟಿಪ್ಪು ಸುಲ್ತಾನ್ಗೆ ಬೆಂಬಲ ಸೂಚಿಸಿ, ಸಂಘ ಪರಿವಾರದ ಭಾವನೆಗಳಿಗೆ ಕೊಡಲಿ ಪೆಟ್ಟು ಕೊಡುವುದನ್ನು ತಾವು ಹಾಗೂ ತಮ್ಮ ಸ್ನೇಹಿತರು ಮುಂದುವರೆಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಯಾರೋ ಯುವಕ ಪದೇ ಪದೇ ಫೋನಾಯಿಸಿ ತೊಂದರೆ ಕೊಡುತ್ತಿದ್ದಾನೆ ಎಂದು ರಾಮದಾಸ್ ಕುವೆಂಪುನಗರ ಪೊಲೀಸ್ ಠಾಣೆಗೆ ದೂರಿತ್ತಿದ್ದಾರೆ.
ಕೋಮು ಸೌಹಾರ್ದ ಸಮಿತಿಯಲ್ಲಿ ಸಕ್ರಿಯ ಚಳವಳಿಕಾರರಾಗಿ ಗುರುತಿಸಿಕೊಂಡಿರುವ ರಾಮದಾಸ್ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿರುವ ವ್ಯಕ್ತಿ ಅವರನ್ನು ಕೊಲ್ಲುವುದಷ್ಟೇ ಅಲ್ಲದೆ ಅವರ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಶಿವರಾಮ ಪೇಟೆ ಪ್ರದೇಶದ ಚೆಲುಫೋನ್ ಬೂತಿನಿಂದ ವ್ಯಕ್ತಿ ಕರೆಗಳನ್ನು ಮಾಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು, ಆರೋಪಿಯನ್ನು ಕಂಡುಹಿಡಿಯಲು ಶತಾಯಗತಾಯ ಯತ್ನಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...