ಧ್ವಜ ವಿವಾದ : ಶ್ರೀರಾಂಪುರದಲ್ಲಿ ಲಾಠಿ ಪ್ರಹಾರ
ಬೆಂಗಳೂರು : ನಗರದ ಶ್ರೀರಾಂಪುರ ಬಡಾವಣೆಯಲ್ಲಿ ಮೇ 8ರ ಗುರುವಾರ ಧ್ವಜ ವಿವಾದ ಮರುಕಳಿಸಿತು.
ಮೇ 5 ರಂದು ಶ್ರೀರಾಂಪುರದಲ್ಲಿ ಕನ್ನಡ ಬಾವುಟವನ್ನು ಕೆಲವು ಕಿಡಿಗೇಡಿಗಳು ಸುಟ್ಟ ಕಾರಣ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿಕಾರರು ಡಿಎಂಕೆ ಪಕ್ಷದ ಬಾವುಟವನ್ನು ಗುರುವಾರ ಇಳಿಸಿದರು ಎನ್ನಲಾಗಿದ್ದು, ಇದರಿಂದ ಶ್ರೀರಾಂಪುರ ಬಡಾವಣೆಯಲ್ಲಿ ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಬೇಕಾಯಿತು. ಕಲ್ಲು ತೂರಾಟದಲ್ಲಿ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಗಾಯಗೊಂಡಿದ್ದಾರೆ.
ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ ಮೊದಲಾದವರ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಗುರುವಾರ ಮುಂಜಾನೆ 10 ಗಂಟೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಧ್ಯಾಹ್ನ ಸುಮಾರು 12.45ರ ವೇಳೆಯಲ್ಲಿ ಪ್ರತಿಭಟನಾಕಾರರು ಶ್ರೀರಾಂಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಅಲ್ಲಿಯವರೆಗೆ ತಣ್ಣಗಿದ್ದ ಪರಿಸ್ಥಿತಿ ಬಿಗಡಾಯಿಸಿತು. ಡಿಎಂಕೆ ಧ್ವಜವನ್ನು ಕನ್ನಡ ಚಳವಳಿಕಾರರು ಇಳಿಸಿದರು ಎಂಬ ಸುದ್ದಿ ಹಬ್ಬಿ, ಕಲ್ಲುತೂರಾಟ ಶುರುವಾಯಿತು. ಅಂಗಡಿ- ಮುಂಗಟ್ಟುಗಳು ಮುಚ್ಚಿದವು.
ರಕ್ಷಣೆ ಕೋರಿ ಠಾಣೆಯನ್ನು ಸುಮಾರು 300 ಪ್ರತಿಭಟನಾಕಾರರು ಸುತ್ತಿವರಿದು, ಕಲ್ಲು ತೂರಾಟ ನಡೆಸಿದರು. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ ನಂತರ ಚಳವಳಿಗಾರರು ಚದುರಿದರು.
ಕಲ್ಲುತೂರಾಟದಲ್ಲಿ ಅನೇಕ ಅಮಾಯಕರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀರಾಂಪುರದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...