ಕನ್ನಡಧ್ವಜಕ್ಕೆ ಬೆಂಕಿ ; ರಾಜ್ ಅಭಿಮಾನಿಗಳ ಧರಣಿ
ಬೆಂಗಳೂರು : ನಗರದ ಶ್ರೀರಾಮಪುರ ಪ್ರದೇಶದಲ್ಲಿ ಕನ್ನಡ ಬಾವುಟವನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದು , ಕನ್ನಡ ಪರ ಸಂಘಟನೆಗಳು ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿವೆ.
ಶ್ರೀರಾಮಪುರದ ದಯಾನಂದ ನಗರದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಸ್ಥಾಪಿಸಿದ್ದ ಧ್ವಜ ಸ್ತಂಭದಲ್ಲಿದ್ದ ಕನ್ನಡ ಬಾವುಟವನ್ನು ಕಿಡಿಗೇಡಿಗಳು ಸುಟ್ಟಿದ್ದಾರೆ. ಇಂಥ ಪ್ರಕರಣಗಳಿಂದ ಕನ್ನಡಿಗರು ಪರ ಭಾಷಿಕರನ್ನು ಸಂದೇಹದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕನ್ನಡ ಸಂಘಟನೆಗಳು ಮೇ4ರ ಸೋಮವಾರ ಎಚ್ಚರಿಸಿವೆ.
ಕರ್ನಾಟಕ ಹೋರಾಟ ವೇದಿಕೆ, ಮೈಕೋ ಕನ್ನಡ ಬಳಗ, ಚಾಲುಕ್ಯ ಯುವಕರ ಸಂಘಗಳು ಜಂಟಿಯಾಗಿ ಸುದ್ದಿ ಹೇಳಿಕೆ ನೀಡಿದ್ದು , ಕನ್ನಡ ಬಾವುಟ ಸುಟ್ಟ ಪ್ರಕರಣವನ್ನು ಖಂಡಿಸಿವೆ. ಭಾಷ್ಯಂ ನಗರ ಯುವಕರ ಸಂಘ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
ಪ್ರತಿಭಟನೆ : ಕನ್ನಡ ಬಾವುಟವನ್ನು ಸುಟ್ಟ ಪ್ರಕರಣದ ಕುರಿತು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಶ್ರೀರಾಮಪುರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ನಾರಾಯಣಗೌಡರು ಎರಡು ದಿನಗಳಲ್ಲಿ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವುದಾಗಿ ನೀಡಿದ ಭರವಸೆಯ ಹಿನ್ನೆಲೆಯನ್ನು ರಾಜ್ ಅಭಿಮಾನಿಗಳು ತಮ್ಮ ಧರಣಿಯನ್ನು ವಾಪಸ್ಸು ಪಡೆದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...