ಅಡಕೆಗೆ ಸದ್ಯದಲ್ಲೇ ಬೆಂಬಲ ಬೆಲೆ ಘೋಷಣೆ
ಬೆಂಗಳೂರು: ಅಡಕೆ ಧಾರಣೆಗೆ ನೆರವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆ ಘೋಷಿಸಿ ಮಾರುಕಟ್ಟೆ ಪ್ರವೇಶಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಅಡಕೆ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆ ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿಸಲಾಗುವುದು. ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ಎಂ. ಶಿವಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಡಿಕೆಗೆ ಬೆಲೆ ನಿಗದಿ, ಗುಣಮಟ್ಟ, ಖರೀದಿ ಸಮಯ ಮುಂತಾದ ವಿಷಯಗಳ ಬಗ್ಗೆ ಅಭಿವೃದ್ಧಿ ಆಯುಕ್ತರ ನೇತೃತ್ವದ ಉನ್ನತ ಮಟ್ಟದ ಸಮಿತಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಣ್ಣ ಭರವಸೆ ನೀಡಿದ್ದಾರೆ.
ಈ ಮಧ್ಯೆ ಅಡಿಕೆಯನ್ನು ಕೇಂದ್ರದ ಆಹಾರ ಕಲಬೆರಕೆ ಕಾಯ್ದೆಯಿಂದ ಹೊರಗಿಡಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ನಾಗರಾಜ ಶೆಟ್ಟಿ ಆಗ್ರಹಿಸಿದ್ದಾರೆ. ಸಿಗರೇಟಿನಲ್ಲಿ ನಿಕೋಟಿನ್, ಕಾಫಿಯಲ್ಲಿ ಕೆಫಿನ್ ಇರುವಂತೆ ಅಡಿಕೆಯಲ್ಲಿ ಹಾನಿಕಾರಕವಾದದ್ದೇನೂ ಇಲ್ಲ. ಆದರೂ ಸರಕಾರ ಅಡಿಕೆಯನ್ನು ಈ ಕಾಯ್ದೆಯಡಿ ತಂದಿರುವುದರ ವಿರುದ್ಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...