ದೇವೇಗೌಡರ ವಿರುದ್ಧ ಬಂಡೇಳಿ- ಮಠಗಳಿಗೆ ಡೀಕೇಶಿ ಕರೆ
ಬೆಂಗಳೂರು : ಕಾವಿ ಕಿತ್ತು, ಚುನಾವಣೆಗೆ ಸ್ಪರ್ಧಿಸಿ ಎಂದು ಆದಿ ಚುಂಚನಗಿರಿ ಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಕೆಣಕುವ ಮೂಲಕ ದೇವೇಗೌಡರು ಎಲ್ಲಾ ಸ್ವಾಮೀಜಿಗಳಿಗೆ ಸವಾಲೆಸೆದಿದ್ದಾರೆ. ದೇವೇಗೌಡರ ವಿರುದ್ಧ ಎಲ್ಲಾ ಮಠಾಧೀಶರೂ ಬಂಡೇಳಬೇಕು ಎಂದು ಸೋಮವಾರ ಹೇಳುವ ಮೂಲಕ ರಾಜ್ಯ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಗೌಡರ ಗದ್ದಲದ ಅಬ್ಬರವನ್ನು ಹೆಚ್ಚಿಸಿದ್ದಾರೆ.
ಭಾನುವಾರ ಕೆಂಗೇರಿಯಲ್ಲಿ ಚಂದ್ರಶೇಖರ ಸ್ವಾಮೀಜಿ ನೇತೃತ್ವದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಬೆಳ್ಳಿ ಹಬ್ಬ ಆಚರಿಸಿ, ಬಾಲ ಗಂಗಾಧರನಾಥ ಸ್ವಾಮೀಜಿಗೆ ದೇವೇಗೌಡರು ನೇರವಾಗಿ ಯುದ್ಧದ ಆಮಂತ್ರಣವನ್ನು ಕೊಟ್ಟರು. ದೇವೇಗೌಡರ ಈ ನಡಾವಳಿಯನ್ನು ತೀವ್ರವಾಗಿ ಖಂಡಿಸಿದ ಡಿ.ಕೆ.ಶಿವಕುಮಾರ್, ಚಂದ್ರಶೇಖರ ಸ್ವಾಮೀಜಿಗಳ ಮಠ ಜಾತ್ಯತೀತ ಜನತಾ ದಳದ ಅಡ್ಡೆಯಾಗಿ ಪರಿವರ್ತಿತವಾಗಿದೆ ಎಂದು ದೂರಿದರು.
ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ಧರ್ಮವನ್ನೇ ರಾಜಕೀಯಗೊಳಿಸುವುದು ಹೇಯಕರ. ದೇವೇಗೌಡರು ಮಾಡಿರುವುದು ಅದನ್ನೇ. ಕೆಂಗೇರಿಯಲ್ಲಿರುವ ಮಠಕ್ಕೇ ಸ್ವಂತ ಅಸ್ತಿತ್ವವಿಲ್ಲ. ಅದು ಆದಿಚುಂಚನಗಿರಿಯ ಮಠಕ್ಕೇ ಸೇರಿದ್ದು. ಹಾಗಿರುವಾಗ ಅಲ್ಲಿ ದೇವೇಗೌಡರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಜಾತಿಯನ್ನು, ಧರ್ಮವನ್ನು ಒಡೆದು ಹೊಸ ಜಾತಿ ಕಟ್ಟಲು ಹೋದವರು ಸರ್ವ ನಾಶವಾಗಿ ಹೋಗುತ್ತಾರೆ ಎಂದು ಕಿಡಿ ಕಾರಿದರು.
ಅಂದಹಾಗೆ, ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದ ರಾಜಕಾರಣಿ.
(ಪಿಟಿಐ)
ಇದನ್ನೂ
ಓದಿ
ಮುಖಪುಟ
/
ಇವತ್ತು...
ಈ
ಹೊತ್ತು...