ತೀರ್ಥಹಳ್ಳಿಯಲ್ಲಿ ಮಂಗನಕಾಯಿಲೆಗೆ ಒಬ್ಬ ಬಲಿ
ಶಿವಮೊಗ್ಗ : ತೀರ್ಥಹಳ್ಳಿ ತಾಲ್ಲೂಕಿನ ಸುರೇಶ (16) ಎಂಬಾತ ಮಂಗನಕಾಯಿಲೆಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಯಿಲೆ ಈ ಪರಿ ತೀವ್ರವಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಮಿಹಿಶಿ ಎಂಬ ಹಳ್ಳಿಯ ನೆಂಟರ ಮನೆಗೆ ಬೇಸಗೆ ರಜೆ ಕಳೆಯಲು ಸುರೇಶ್ ಬಂದಾಗ ಈ ರೋಗಕ್ಕೆ ತುತ್ತಾದ. ಪರೀಕ್ಷೆ ಮುಗಿಸಿ ಖುಷಿಯಾಗಿ ರಜೆ ಕಳೆಯಬೇಕೆಂದು ಆತ ಬಂದಿದ್ದ. ಸುರೇಶನಿಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಥವಾ ಮಂಗನಕಾಯಿಲೆ ಇದೆ ಎಂಬುದನ್ನು ತೀರ್ಥಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪತ್ತೆ ಹಚ್ಚಿ, ಚಿಕಿತ್ಸೆಯನ್ನೂ ಕೊಟ್ಟರು. ರೋಗ ಉಲ್ಬಣಿಸಿದಾಗ ಮೆಕ್ ಗ್ಲಾನ್ ಆಸ್ಪತ್ರೆಗೆ ವರ್ಗಾಯಿಸುವುದು ಅನಿವಾರ್ಯವಾಯಿತು. ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಾಗ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಸುರೇಶ ಬದುಕಿ ಉಳಿಯಲಿಲ್ಲ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ 18 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಮಹಿಶಿಯಲ್ಲಿ ಮೂರು ಮಂಗಗಳು ಸತ್ತಿದ್ದು, ರೋಗ ಇನ್ನಷ್ಟು ಜೋರಾಗಿ ಹರಡುವ ಆತಂಕವಿದೆ. ಹೀಗಾಗಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸುಸಜ್ಜಿತ ಸಂಚಾರಿ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...